ಗುಂಡ್ಲುಪೇಟೆ : ಪಟ್ಟಣದ ಅಮಾನಿಕೆರೆ ಏರಿ ಮಾರ್ಗದಲ್ಲಿ ರಕ್ತದ ಮಡುವಿನಲ್ಲಿ ಬಿದ್ದ ಯುವಕನ ಶವ ಬುಧವಾರ ಸಂಜೆ ಪತ್ತೆಯಾಗಿದ್ದು ಮದ್ಯಪಾನ ಮಾಡುವ ವೇಳೆ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ತಾಲ್ಲೂಕಿನ ಮೂಕಹಳ್ಳಿ ಗ್ರಾಮದ ನಂಜುಂಡಸ್ವಾಮಿ ( 24) ಮೃತ ಯುವಕ ಎಂಬುದಾಗಿ ತಿಳಿದುಬಂದಿದೆ, ಸಾರ್ವಜನಿಕರ ಮಾಹಿತಿ ಮೇರೆಗೆ ಗುಂಡ್ಲುಪೇಟೆ ಪಿಐ ಜಯಕುಮಾರ್, ತೆರಕಣಾಂಬಿ ಪಿ ಎಸ್ ಐ ಮಹೇಶ್ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು, ಘಟನಾ ಸಂಬಂಧ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್, ಡಿವೈಎಸ್ಪಿ ಸ್ನೇಹಾರಾಜ್ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ಮೃತ ಯುವಕನ ದ್ವಿಚಕ್ರವಾಹನವನ್ನು ವಶಕ್ಕೆ ಪಡೆದಿರುವ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ.
ಹತ್ಯೆ ಶಂಕೆ : ಮೃತ ಯುವಕನ ಕುತ್ತಿಗೆ ಭಾಗದಲ್ಲಾಗಿರುವ ಗಾಯದ ಗುರುತು ಗಮನಿಸಿದಾಗ ಚಾಕುವಿನಿಂದ ಇರಿದು ಹತ್ಯೆಗೈದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಂಜುಂಡಸ್ವಾಮಿ ಊರಿಗೆ ಬಂದಿದ್ದ ವೇಳೆ ಸ್ನೇಹಿತರೊಟ್ಟಿಗೆ ಹೊರಹೋಗುತ್ತಿದ್ದ ಎನ್ನಲಾಗಿದ್ದು ಪಟ್ಟಣಕ್ಕೆ ಹೋದ ಬಳಿಕ ವಾಪಸ್ ಮನೆಗೆ ಬಂದಿರಲಿಲ್ಲ ಎಂದು ಕುಟುಂಬಸ್ತರ ಮೂಲದಿಂದ ಮಾಹಿತಿ ಲಭ್ಯವಾಗಿದೆ. ಘಟನಾ ಸಂಬಂಧ ಗುಂಡ್ಲುಪೇಟೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Kshetra Samachara
11/03/2026 08:49 pm
LOADING...