ಶಿಗ್ಗಾವಿ: ಮಹಿಳಾ ನೌಕರರು ಕೇವಲ ಮಹಿಳೆಯರು ಎಂಬ ಕಾರಣಕ್ಕೆ ಅನಗತ್ಯ ಸೌಲಭ್ಯಗಳನ್ನು ಬಳಸಿಕೊಳ್ಳಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಕರೆ ನೀಡಿದರು. ಪಟ್ಟಣದ ಡಾ| ಬಿ.ಆರ್. ಅಂಬೇಡ್ಕರ್ ಆಡಳಿತ ಕಚೇರಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಆಯೋಜಿಸಿದ್ದ 'ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನಾವು ಕರ್ತವ್ಯದಲ್ಲಿರುವಾಗ ನಮ್ಮನ್ನು ಅಧಿಕಾರಿಗಳೆಂದು ನೋಡಬೇಕೇ ಹೊರತು ಕೇವಲ ಮಹಿಳೆಯರೆಂದಲ್ಲ. ಮಹಿಳೆಯರು ಜೈವಿಕ ಸಮಸ್ಯೆಗಳನ್ನು ಮೆಟ್ಟಿನಿಂತು ಸಾಧನೆಯ ಹಾದಿಯಲ್ಲಿ ಸಾಗಬೇಕು" ಎಂದು ಒತ್ತಿ ಹೇಳಿದರು.
ಇದೇ ವೇಳೆ, ಕೆಲ ಸಾಮಾಜಿಕ ಸಮಸ್ಯೆಗಳ ಬಗ್ಗೆಯೂ ವಂಟಗೋಡಿ ಕಳವಳ ವ್ಯಕ್ತಪಡಿಸಿದರು. ಇತ್ತೀಚೆಗೆ ಮೊಬೈಲ್ ವ್ಯಾಮೋಹದಿಂದ ಮಕ್ಕಳು ಆತ್ಮಹತ್ಯೆಯ ಹಾದಿ ಹಿಡಿಯುತ್ತಿರುವುದು ದುರಂತ. ಈ ಬಗ್ಗೆ ತಾಯಂದಿರು ಹೆಚ್ಚಿನ ನಿಗಾ ವಹಿಸಬೇಕು ಎಂದರು. ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಈ ಕಾಲದಲ್ಲಿಯೂ ಕೆಲವು ಮಹಿಳೆಯರೇ ಭ್ರೂಣಹತ್ಯೆಗೆ ಪ್ರೇರೇಪಿಸುತ್ತಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದರು. ಮಹಿಳೆಯರು ಧಾರಾವಾಹಿ ನೋಡುವುದನ್ನು ಬಿಟ್ಟು ಆರೋಗ್ಯ ಹಾಗೂ ಸೃಜನಶೀಲ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಹೋದ್ಯೋಗಿ ಮಹಿಳೆಯರ ಬಗ್ಗೆ ಗಾಸಿಪ್ ಮಾಡುವುದನ್ನು ನಿಲ್ಲಿಸಬೇಕು. ದೌರ್ಜನ್ಯ ನಡೆದಾಗ ಮೌನವಾಗಿರದೇ ಧ್ವನಿ ಎತ್ತಬೇಕು, ಆದರೆ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು. ವೈಯಕ್ತಿಕ ಗೌರವ ಕಾಪಾಡಿಕೊಂಡಾಗ ಇಲಾಖೆಯ ಹೆಸರೂ ವೃದ್ಧಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಡಾ| ಎ.ಸಿ. ವಾಲಿ ಮಹಾರಾಜರು ಮಾತನಾಡಿದರು. ರಾಜ್ಯ ನೌಕರರ ಸಂಘದ ತಾಲೂಕು ಅಧ್ಯಕ್ಷ ಅರುಣ ಹುಡೇದಗೌಡ್ರ, ಮಲ್ಲೇಶ ಕರಿಗಾರ, ಶೈಲಜಾ ಹುದ್ದಾರ, ವಿಜಯಾ ಪಾಟೀಲ, ಸರಸ್ವತಿ ಗಜಕೋಶ, ನಾಗಮ್ಮ ಮಣ್ಣಣ್ಣನವರ, ಗೀತಾಂಜಲಿ ತೆಪ್ಪದ, ವಿನೋದಾ ಪಾಟೀಲ, ಶಬ್ಬಿರ ಮುನಿಯಾರ, ರಮೇಶ ಹರಿಜನ, ಶಾಂತಕುಮಾರ ಎತ್ತಿನಹಳ್ಳಿ, ವಿದ್ಯಾ ಖುರ್ಸಾಪುರ, ಮಂಜುಳಾ ಹೊಳೆಸಿರಿಯಾರ, ಎಂಬಿ ಅಂಬಿಗೇರ ಸೇರಿದಂತೆ ಹಲವು ಗಣ್ಯರು ಹಾಗೂ ನೌಕರರು ಉಪಸ್ಥಿತರಿದ್ದರು.
ವರದಿ: ಚನ್ನವೀರ ನೀರಲಗಿ, ಪಬ್ಲಿಕ್ ನೆಕ್ಸ್ಟ್.
PublicNext
12/03/2026 07:26 pm