ಮಂಡ್ಯ : ಮಧ್ಯ ಪ್ರಾಚ್ಯ ದೇಶಗಳಲ್ಲಿ ಉಂಟಾಗಿರುವ ಯುದ್ಧದ ಬಿಕ್ಕಟ್ಟಿನಿಂದಾಗಿ ಅನಿಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದೆಂಬ ಆತಂಕ/ಗೊಂದಲಕ್ಕೆ ಒಳಗಾಗಿದ್ದ ಅನಿಲ ಬಳಕೆದಾರರಿಗೆ ಜಿಲ್ಲಾಡಳಿತವು ಮಹತ್ವದ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಅನಿಲ ಕಂಪನಿ ವಿತರಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಗೃಹ ಬಳಕೆದಾರರಿಗೆ ಗೃಹ ಬಳಕೆ ಸಿಲಿಂಡರ್ಗಳನ್ನು ಮತ್ತು ಕಾರ್ಯನಿರ್ವಹಿಸುತ್ತಿರುವ ಸರ್ಕಾರದ ಅನುದಾನಿತ ಹಾಸ್ಟೆಲ್ಗಳು, ಅಕ್ಷರ ದಾಸೋಹ ಸಂಸ್ಥೆಗಳು, ಆಸ್ಪತ್ರೆಗಳು, ಮಧ್ಯಾಹ್ನ ಉಪಹಾರ ಯೋಜನೆಯಡಿ ಆಹಾರ ವಿತರಿಸುವ ಸಂಸ್ಥೆಗಳು ಹಾಗೂ ಅಂಗನವಾಡಿಗಳಿಗೆ ವಾಣಿಜ್ಯ ಬಳಕೆ ಸಿಲಿಂಡರ್ಗಳನ್ನು ಯಾವುದೇ ಕೊರತೆಯಾಗದಂತೆ ಆದ್ಯತೆ ಮೇಲೆ ಕಡ್ಡಾಯವಾಗಿ ಸರಬರಾಜು ಮಾಡುವಂತೆ ಅನಿಲ ಸರಬರಾಜು ಕಂಪನಿಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಆದ್ದರಿಂದ ಸಾರ್ವಜನಿಕರು ಯಾವುದೇ ಆತಂಕ ಅಥವಾ ಗೊಂದಲಕ್ಕೆ ಒಳಗಾಗಬಾರದೆಂದು ಮತ್ತೊಮ್ಮೆ ತಿಳಿಸಲಾಗಿದೆ.
ಗೃಹ ಬಳಕೆದಾರರಿಗೆ ಸಿಲಿಂಡರ್ಗಳನ್ನು ಸಮರ್ಪಕವಾಗಿ ವಿತರಿಸುವ ದೃಷ್ಟಿಯಿಂದ, ಅನಿಲ ಕಂಪನಿ ಅಧಿಕಾರಿಗಳು ಬುಕಿಂಗ್ ಅವಧಿಯನ್ನು ನಿಗದಿಪಡಿಸಿದ್ದಾರೆ. ಗ್ರಾಮಾಂತರ ಪ್ರದೇಶದ ಬಳಕೆದಾರರಿಗೆ 45 ದಿನಗಳು ಮತ್ತು ನಗರ ಪ್ರದೇಶದ ಬಳಕೆದಾರರಿಗೆ 25 ದಿನಗಳ ಬುಕಿಂಗ್ ಅವಧಿಯನ್ನು ನಿಗದಿಪಡಿಸಲಾಗಿದೆ.
ಆದ್ದರಿಂದ ಗೃಹ ಬಳಕೆದಾರರು ಈ ಹೊಸ ಬುಕಿಂಗ್ ಅವಧಿಗೆ ಸಹಕರಿಸಬೇಕೆಂದು ಕೋರಲಾಗಿದೆ. ಯಾವುದೇ ಆತಂಕ ಅಥವಾ ಗೊಂದಲಕ್ಕೆ ಒಳಗಾಗಿ ಅನಗತ್ಯವಾಗಿ ತುರ್ತು ಬುಕಿಂಗ್ ಮಾಡುವುದನ್ನು ತಪ್ಪಿಸಬೇಕು ಹಾಗೂ ಅನಿಲ ವಿತರಕ ಏಜೆನ್ಸಿಗಳ ಮುಂದೆ ಅನಗತ್ಯವಾಗಿ ಸಾಲುಗಟ್ಟಿ ನಿಲ್ಲಬಾರದು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
ನಿಗದಿತ ಬುಕಿಂಗ್ ಅವಧಿಯ ನಂತರವೂ ಯಾವುದೇ ಅನಿಲ ವಿತರಕರು ಸಿಲಿಂಡರ್ಗಳನ್ನು ವಿತರಿಸದಿದ್ದಲ್ಲಿ, ಜಿಲ್ಲಾಡಳಿತವು ತೆರೆದಿರುವ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದಾಗಿದೆ.
ನಿಯಂತ್ರಣ ಕೊಠಡಿ ಸಂಖ್ಯೆ: 08232-224655
Kshetra Samachara
14/03/2026 10:25 pm