ಭಟ್ಕಳ: ಸ್ಥಳೀಯ ನ್ಯಾಯಾಲಯಗಳ ಸಂಕೀರ್ಣದಲ್ಲಿ ನಡೆದ ಲೋಕ ಅದಾಲತ್ನಲ್ಲಿ ಮೂರು ನ್ಯಾಯಾಲಯಗಳು ಸೇರಿ ಒಟ್ಟು 1406 ಪ್ರಕರಣಗಳನ್ನು ಇತ್ಯರ್ಥಪಡಿಸಿ ಉತ್ತಮ ಸಾಧನೆ ಮಾಡಲಾಗಿದೆ.
ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಿಕ ಸಂಧಾನಕಾರರಾಗಿ ದೀಪಾ ಅರಳಗುಂಡಿ ಮತ್ತು ನ್ಯಾಯಿಕೇತರ ಸಂಧಾನಕಾರರಾಗಿ ಸಹನಾ ಮೊಗೇರ ಕರ್ತವ್ಯ ನಿರ್ವಹಿಸಿದರು. ಸಂಧಾನಕ್ಕಾಗಿ ಆಯ್ಕೆ ಮಾಡಲಾದ 598 ಪ್ರಕರಣಗಳಲ್ಲಿ 547 ಪ್ರಕರಣಗಳು ಇತ್ಯರ್ಥಗೊಂಡಿವೆ. ಪರಿಹಾರ ಹಾಗೂ ದಂಡದ ರೂಪದಲ್ಲಿ ರೂ. 2,17,98,566 ಮೊತ್ತವನ್ನು ಕಕ್ಷಿದಾರರಿಗೆ ನೀಡುವಂತೆ ಮಾಡಿ, ದಂಡವನ್ನು ಸರ್ಕಾರದ ಪರವಾಗಿ ವಸೂಲಿ ಮಾಡಲಾಗಿದೆ.
ಹೆಚ್ಚುವರಿ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಿಕ ಸಂಧಾನಕಾರರಾಗಿ ಧನವತಿ ಮತ್ತು ನ್ಯಾಯಿಕೇತರ ಸಂಧಾನಕಾರರಾಗಿ ಶಬೀನಾ ಕರ್ತವ್ಯ ನಿರ್ವಹಿಸಿದರು. ಸಂಧಾನಕ್ಕಾಗಿ ಆಯ್ಕೆ ಮಾಡಲಾದ 625 ಪ್ರಕರಣಗಳಲ್ಲಿ 575 ಪ್ರಕರಣಗಳು ಇತ್ಯರ್ಥಗೊಂಡಿವೆ. ಪರಿಹಾರ ಹಾಗೂ ದಂಡದ ರೂಪದಲ್ಲಿ ರೂ.2,26,60,875 ಮೊತ್ತವನ್ನು ಕಕ್ಷಿದಾರರಿಗೆ ನೀಡುವಂತೆ ಮಾಡಿ, ದಂಡವನ್ನು ಸರ್ಕಾರದ ಪರವಾಗಿ ವಸೂಲಿ ಮಾಡಲಾಗಿದೆ.
ಹಿರಿಯ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನ್ಯಾಯಿಕ ಸಂಧಾನಕಾರರಾಗಿ ಕಾಂತ ಕುರಣಿ ಮತ್ತು ನ್ಯಾಯಿಕೇತರ ಸಂಧಾನಕಾರರಾಗಿ ಶ್ರಾವ್ಯಾ ನಾಯ್ಕ ಕರ್ತವ್ಯ ನಿರ್ವಹಿಸಿದರು. ಇಲ್ಲಿ ಸಂಧಾನಕ್ಕಾಗಿ ಆಯ್ಕೆ ಮಾಡಲಾದ 303 ಪ್ರಕರಣಗಳಲ್ಲಿ 680 ಪ್ರಕರಣಗಳು ಇತ್ಯರ್ಥಗೊಂಡಿವೆ. ಪರಿಹಾರ ಹಾಗೂ ದಂಡದ ರೂಪದಲ್ಲಿ ರೂ. 1,99,86,153 ಮೊತ್ತವನ್ನು ಕಕ್ಷಿದಾರರಿಗೆ ನೀಡುವಂತೆ ಮಾಡಿ, ದಂಡವನ್ನು ಸರ್ಕಾರದ ಪರವಾಗಿ ವಸೂಲಿ ಮಾಡಲಾಗಿದೆ.
ಇದೇ ವೇಳೆ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ನಲ್ಲಿ ವಿಚ್ಛೇದನದ ಹಂತಕ್ಕೆ ತಲುಪಿದ್ದ ದಂಪತಿಗಳು ಸಂಧಾನದ ಮೂಲಕ ಮತ್ತೆ ಒಂದಾದುದು ವಿಶೇಷವಾಗಿತ್ತು.
2020ರಲ್ಲಿ ವಿವಾಹವಾಗಿದ್ದ ದಂಪತಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಕುಟುಂಬದೊಳಗಿನ ಮನಸ್ತಾಪದ ಹಿನ್ನೆಲೆಯಲ್ಲಿ ಪತ್ನಿ 2024ರಲ್ಲಿ ತವರು ಮನೆ ಸೇರಿದ್ದರೂ, ಮಗುವನ್ನು ತಂದೆಯೇ ನೋಡಿಕೊಳ್ಳುತ್ತಿದ್ದರು. ಬಳಿಕ 2025ರಲ್ಲಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಲೋಕ ಅದಾಲತ್ನಲ್ಲಿ ಪ್ರಕರಣವನ್ನು ಸಂಧಾನಕ್ಕೆ ತರಲಾಗಿದ್ದು, ಪರಸ್ಪರ ಒಪ್ಪಿಗೆಯಿಂದ ದಂಪತಿಗಳು ಮತ್ತೆ ಒಂದಾಗಿ ಗುಲಾಬಿ ಹೂ ನೀಡಿ ಸಿಹಿ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದರು.
PublicNext
17/03/2026 09:39 am