ನವಲಗುಂದ : ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಶಾಸಕ ಎನ್.ಹೆಚ್. ಕೋನರಡ್ಡಿ ಅವರು, ಸರ್ವಧರ್ಮಕ್ಕೂ ಶಾಂತಿ ಮತ್ತು ಸಹಬಾಳ್ವೆಯ ಸಂದೇಶ ಸಾರಿದ ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರರನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಅವರು ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಿ, ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡಿದರು.
ಅಲ್ಪಸಂಖ್ಯಾತ ಸಮುದಾಯಕ್ಕೆ ಅನುದಾನ ಬಿಡುಗಡೆ
ತಾಲ್ಲೂಕಿನ ಸಮಗ್ರ ಅಭಿವೃದ್ಧಿಯೇ ತಮ್ಮ ಕನಸಾಗಿದ್ದು, ನಿರ್ದಿಷ್ಟವಾಗಿ ಅಲ್ಪಸಂಖ್ಯಾತ ಸಮುದಾಯದ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಶಾಸಕ ಕೋನರಡ್ಡಿ ತಿಳಿಸಿದರು.
ಈ ನಿಟ್ಟಿನಲ್ಲಿ, ನಗರದ ಅಂಜುಮನ್ ಶಾದಿಮಹಲ್ ಕಟ್ಟಡ ನವೀಕರಣಕ್ಕೆ 25 ಲಕ್ಷ ರೂ., ಕುಂಬಾರ ಓಣಿಯ ಸುನ್ನಿ ಜಮಾತ್ ಮಸೀದಿಗೆ 15 ಲಕ್ಷ ರೂ., ಮೊರಬ ಗ್ರಾಮದ ಹಿರೇಮಸೀದಿಗೆ 20 ಲಕ್ಷ ರೂ., ನಾಗನೂರು ಗ್ರಾಮದ ದಾವಲಮಲಿಕ್ ದರ್ಗಾ ಕಟ್ಟಡಕ್ಕೆ 20 ಲಕ್ಷ ರೂ. ಹಾಗೂ ಅದೇ ಗ್ರಾಮದ ಒಳಗಿರುವ ಮಸೀದಿ ನಿರ್ಮಾಣಕ್ಕೆ 10 ಲಕ್ಷ ರೂ., ಅಳಗವಾಡಿ ಗ್ರಾಮದ ಮಸೀದಿ ನಿರ್ಮಾಣಕ್ಕೆ 15 ಲಕ್ಷ ರೂ., ಹಣಸಿ ಗ್ರಾಮದ ಅಂಜುಮನ್ ಇಸ್ಲಾಂ ಕಮಿಟಿಗೆ 15 ಲಕ್ಷ ರೂ., ಶಿರೂರು ಗ್ರಾಮದ ಜುಮ್ಮಾ ಮಸೀದಿಗೆ 10 ಲಕ್ಷ ರೂ. ಮಂಜೂರು ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಧರ್ಮಗುರುಗಳಾದ ಸೈಯದ್ ಅಮಾನುಲ್ಲಾ ಖಾಜಿ, ಸೈಯದ್ ಅಬ್ದುಲ್ ಅಜೀಜ್ ಖಾಜಿ, ವಿನೋದ ಅಸೂಟಿ, ಅಂಜುಮನ್ ಅಧ್ಯಕ್ಷ ಅಲ್ಲಸಾಬ್ ಕಲ್ಲಕುಟ್ರಿ, ಸೈಫುದ್ದೀನ್ ಅವರಾದಿ, ಉಸ್ಮಾನ್ ಬಬರ್ಚಿ, ಮೋದಿನಸಾಬ್ ಶಿರೂರು, ಅಬ್ಬಾಸಲಿ ದೇವರಿಡು, ರಿಯಾಜ್ ಪೀರಜಾದೆ, ಸಿರಾಜಅಹಮ್ಮದ್ ಧಾರವಾಡ, ದಾವಲಸಾಬ್ ಮಸೂತಿ, ಕಾಶೀಮಸಾಬ ಅಲ್ಲಿಬಾಯಿ, ಬಾಬಾಜಾನ್ ಮುಲ್ಲಾ, ಸಿಪಿಐ ರವಿಕುಮಾರ್ ಕಪ್ಪತ್ತನವರ, ಪಿಎಸ್ಐ ಜನಾರ್ಧನ್ ಭಟ್ರಳ್ಳಿ ಸೇರಿದಂತೆ ಸಾವಿರಾರು ಮುಸ್ಲಿಂ ಬಾಂಧವರು ಪ್ರಾರ್ಥನೆಯಲ್ಲಿ ಪಾಲ್ಗೊಂಡು ಸೌಹಾರ್ದತೆ ಮೆರೆದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/03/2026 03:23 pm