ಉಡುಪಿ: ನಗರದ ಬನ್ನಂಜೆ ಡಾ. ವಿ.ಎಸ್. ಆಚಾರ್ಯ ಸರಕಾರಿ ಬಸ್ಸು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಸುಮಾರು ಐದು ವರ್ಷ ಪ್ರಾಯದ ಹೆಣ್ಣು ಮಗುವನ್ನು ರಕ್ಷಿಸಲಾಯಿತು. ರಕ್ಷಿಸಲ್ಪಟ್ಟ ಮಗುವನ್ನು ದೊಡ್ಡಣಗುಡ್ಡೆಯ ಮಕ್ಕಳ ಕಲ್ಯಾಣ ಸಮಿತಿ ಕಚೇರಿ ಎದುರು ಹಾಜರು ಪಡಿಸಲಾಯಿತು. ಬಳಿಕ ಸಮಿತಿಯ ಆದೇಶಾನುಸಾರ ಲಕ್ಷ್ಮೀ ನಗರದ ಕೃಷ್ಣಾನುಗ್ರಹ ದತ್ತು ಸ್ವೀಕಾರ ಕೇಂದ್ರದಲ್ಲಿ ಮಗುವಿಗೆ ಪುನರ್ವಸತಿ ಕಲ್ಪಿಸಲಾಗಿದೆ.
ಬನ್ನಂಜೆ ಬಸ್ಸು ನಿಲ್ದಾಣದಲ್ಲಿ ಮಗು ಅನಾಥ ಸ್ಥಿತಿಯಲ್ಲಿರುವ ಬಗ್ಗೆ ಗಸ್ತು ಕರ್ತವ್ಯದಲ್ಲಿದ್ದ ಅಕ್ಕಪಡೆಗೆ ಸಾರ್ವಜನಿಕರಿಂದ ನಿಖರ ಮಾಹಿತಿ ಲಭಿಸಿದೆ. ಅಕ್ಕ ಪಡೆಯ ರಕ್ಷಿತಾ, ವನಿತಾ, 112 ತುರ್ತು ಸಹಾಯವಾಣಿ ಕೇಂದ್ರದ ಸಿಬ್ಬಂದಿಗಳು, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಪ್ರಕಾಶ್ ಮತ್ತು ವಿದ್ಯಾಶ್ರೀ ಭಾಗವಹಿಸಿದ್ದರು.
ಮಗುವಿನ ತಾಯಿ ನೀಲವ್ವ ಗದಗ ಮೂಲವರಾಗಿದ್ದು, ಪತಿ ಮೃತಪಟ್ಟಿರುವುದರಿಂದ ಜೀವನ ಸಾಗಿಸಲೆಂದು ತಾಯಿ ಮಗುವಿನೊಂದಿಗೆ ಉಡುಪಿಗೆ ವಲಸೆ ಬಂದಿದ್ದರು. ಜೀವನ ನಿರ್ವಹಣೆಗೆ ಕೆಲಸ ಸಿಕ್ಕರೂ ವಸತಿಗೆ ಸ್ಥಳ ಇಲ್ಲದೆ ಬಸ್ ನಿಲ್ದಾಣದಲ್ಲಿ ಕಾಲ ಕಳೆಯಬೇಕಾದ ಅಸಹಾಯಕ ಸ್ಥಿತಿ ತಾಯಿ ಮಗುವಿಗೆ ಎದುರಾಯಿತೆಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ದಿಕ್ಕು ಕಾಣದಾದ ತಾಯಿ, ಎದುರಾದ ಸಮಸ್ಯೆಯನ್ನು ಅಪರಿಚಿತ ನಗರದಲ್ಲಿ ಎದುರಿಸಲಾಗದೆ ಮಗುವನ್ನು ತ್ಯಜಿಸುವ ಕಠೋರ ನಿರ್ಧಾರ ತೆಗೆದುಕೊಳ್ಳಬೇಕಾಯಿತು.
ಕೊನೆಗೆ ಇಲಾಖೆಯ ಸಮಯಪ್ರಜ್ಞೆಯಿಂದ ಸಂಭವನೀಯ ದುರಂತದಿಂದ ತಾಯಿ ಮಗು ಸುರಕ್ಷಿತರಾಗಿದ್ದಾರೆ. ಇಲಾಖೆಯ ಮನವೊಲಿಕೆ, ಸಾಂತ್ವನದ ನುಡಿಗಳಿಗೆ ಜೀವನದಲ್ಲಿ ಸೋತ ತಾಯಿಯ ಮೊಗದಲ್ಲಿ ಗೆಲುವಿನ ನಗೆಬೀರಿದೆ.
PublicNext
21/03/2026 06:10 pm
LOADING...