ಬೆಳಗಾವಿ: ನಗರ ಸೇರಿದಂತೆ ಜಿಲ್ಲೆಯ ಎಲ್ಲ ಕಡೆ ಸೋಮವಾರ ಭಗವಾನ್ ಮಹಾವೀರ ಜಯಂತಿ ಮಹೋತ್ಸವ ಪ್ರಯುಕ್ತ ಶೋಭಾಯಾತ್ರೆ ನಡೆಸಲಾಯಿತು. ಜೈನ ಸಮಾಜದ ಯುವಜನರು, ಪುರುಷರು, ಮಹಿಳೆಯರು, ಮಕ್ಕಳು, ಹಿರಿಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಹಲವಾರು ರೂಪಕಗಳು ಕಣ್ಮನ ಸೆಳೆದವು.
ನಗರದ ಟಿಳಕ ಚೌಕ್ನಲ್ಲಿ ಮೇಯರ್ ಪ್ರೀತಿ ಕಾಮಕರ ಮತ್ತು ಐಆರ್ಎಸ್ ನಿವೃತ್ತ ಅಧಿಕಾರಿ ನರೇಂದ್ರ ಜೈನ್ ಅವರು, ಶೋಭಾಯಾತ್ರೆಗೆ ಚಾಲನೆ ನೀಡಿದರು. ಶಾಸಕ ಅಭಯ್ ಪಾಟೀಲ, ಮಾಜಿ ಶಾಸಕರಾದ ಸಂಜಯ್ ಪಾಟೀಲ, ಅನಿಲ ಬೆನಕೆ ಸೇರಿದಂತೆ ಹಲವು ಮುಖಂಡರು ಕೂಡ ಹೆಜ್ಜೆ ಹಾಕಿದರು. ಅಭಯ್ ಪಾಟೀಲ ಟ್ರ್ಯಾಕ್ಟರ್ ಚಾಲನೆ ಮಾಡಿ ಗಮನ ಸೆಳೆದರು.
ಉಪಮೇಯರ್ ಹನುಮಂತ ಕೊಂಗಾಲಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ಮಾಜಿ ಶಾಸಕ ಸಂಜಯ ಪಾಟೀಲ, ರವಿರಾಜ ಪಾಟೀಲ, ರಾಜೇಂದ್ರ ಜೈನ್ ಕಟಾರಿಯಾ, ಶಿವನಗೌಡ ಪಾಟೀಲ ಇತರರಿದ್ದರು.
ಮೆರವಣಿಗೆ ಶೇರಿ ಗಲ್ಲಿ, ಪಾಟೀಲ ಗಲ್ಲಿಯ ಶನಿ ಮಂದಿರ, ಕಪಿಲೇಶ್ವರ ರಸ್ತೆ, ಶಹಾಪುರದ ಕೋರೆ ಗಲ್ಲಿ, ಎಸ್ಪಿಎಂ ರಸ್ತೆ, ಬಸವೇಶ್ವರ ವೃತ್ತದ ಮಾರ್ಗವಾಗಿ ಯಾತ್ರೆ ಸಾಗಿ ಹಿಂದವಾಡಿಯ ಮಹಾವೀರ ಭವನ ತಲುಪಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ಉತ್ಸಾಹದಿಂದ ಹೆಜ್ಜೆ ಹಾಕಿದರು.
35ಕ್ಕೂ ಅಧಿಕ ರೂಪಕಗಳ ವಾಹನಗಳು ಭಾಗವಹಿಸಿದ್ದವು. ಒಂದಕ್ಕಿಂತ ಇನ್ನೊಂದು ರೂಪಕ ಆಕರ್ಷಕವಾಗಿದ್ದವು. ಕೆಲ ರೂಪಕಗಳು ಜಲ ಸಂರಕ್ಷಣೆ, ಭೂಮಿ ಸಂರಕ್ಷಣೆ, ಪ್ರಾಣಿ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆ ಕುರಿತಾಗಿಯೂ ಜಾಗೃತಿ ಮೂಡಿಸಿದವು.
PublicNext
30/03/2026 08:52 pm
LOADING...