ಹೊಸಪೇಟೆ : ಸರ್ಕಾರದ ಎಲ್ಲಾ ಸೌಲಭ್ಯಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಆಗಿದೆ. ಆದರೆ ಅದೇ ಆಧಾರ್ ಈಗ ಬಡ ಮಹಿಳೆ ಪಾಲಿಗೆ ಮರಣ ಶಾಸನ ಆಗಿ ಪರಿಣಮಿಸಿದೆ. ಆಧಾರ್ನಲ್ಲಿ ಜೀವಂತ ಮಹಿಳೆಯನ್ನ ಸತ್ತಿದ್ದಾಳೆ ಅಂತ ನಮೂದು ಮಾಡಿದ್ದಾರೆ. ಅದೇ ಹೆಸರಿನ ಮಹಿಳೆ ಸಾವನ್ನಪ್ಪಿದವರನ್ನ ಜೀವಂತ ಇದ್ದಾರೆ ಅಂತ ಕಂದಾಯ ಇಲಾಖೆ, ಹೊಸಪೇಟೆ ತಾಲೂಕು ಪಂಚಾಯತಿ ಸಿಬ್ಬಂದಿ, ಗ್ರಾಮ ಪಂ ಅಭಿವೃದ್ಧಿ ಅಧಿಕಾರಿ ನಮೂದಿಸಿದ್ದಾರೆ. ಇದ್ರಿಂದ ಸರ್ಕಾರಿ ಅಧಿಕಾರಿಗಳ ಮಹಾ ಎಡವಟ್ಟಿಗೆ ಹಂಪಮ್ಮ ಅನ್ನೋ ಮಹಿಳೆಯೊಬ್ಬರು ಎರಡು ವರ್ಷದಿಂದ ಕಣ್ಣೀರು ಹಾಕ್ತಿದ್ದಾರೆ. ಈ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದಲ್ಲಿ ನಡೆದಿದೆ. ಆಧಾರ್ ಡಿಲೀಟ್ ಆದ ಬಳಿಕ ಹಂಪಮ್ಮ ನಾನು ಜೀವಂತವಾಗಿದ್ದೇನೆಂದು ಸಾಬೀತುಪಡಿಸಲು ಗ್ರಾಮ ಪಂಚಾಯತಿಯಿಂದ ಹಿಡಿದು ಜಿಲ್ಲಾಧಿಕಾರಿ ಕಚೇರಿಯವರೆಗೂ ಅಲೆದಾಡಿದ್ದಾಳೆ. ಆದ್ರೆ ಹಂಪಮ್ಮ ಅವರ ಅಳಲಿಗೆ ಯಾವೊಬ್ಬ ಅಧಿಕಾರಿಯೂ ಸ್ಪಂದಿಸಿಲ್ಲ.
ಧರ್ಮಸಾಗರ ಗ್ರಾಮದಲ್ಲಿ ಹಂಪಮ್ಮ ಹೆಸರಿನವರು ಇಬ್ಬರು ಮಹಿಳೆಯರು ಇದ್ದರು. ಅದ್ರೆ ಅದರಲ್ಲಿ ಎನ್ ಹಂಪಮ್ಮ ಅನ್ನುವ ಅಜ್ಜಿ ಮೃತಪಟ್ಟಿದ್ದರು. ಆದರೆ ಸರಿಯಾದ ಮಾಹಿತಿ, ಮನೆಗೆ ವಿಸಿಟ್ ಮಾಡದೇ ಜೀವಂತ ಇರೋ ಮಹಿಳೆಯ ಫೋಟೋ ನೋಡದೇ ಎನ್ ಹಂಪಮ್ಮ ರೆಡ್ಡಿ ಎನ್ನುವವರ ಆಧಾರ್ ನಂಬರ್ ಡಿಲೀಟ್ ಮಾಡಿದ್ದಾರೆ. ಆ ಒಂದು ಸಣ್ಣ ತಪ್ಪು ಮಾಹಿತಿಯಿಂದ ಹಂಪಮ್ಮ ಜೀವಂತ ಇದ್ದರು ದಾಖಲೆಗಳಲ್ಲಿ ಇಲ್ಲದಂತೆ ಆಗಿದೆ. 2024 ನವೆಂಬರ್ ತಿಂಗಳಲ್ಲಿ ಆಧಾರ್ ಕಾರ್ಡ್ನಲ್ಲಿ ಡೆತ್ ಅಂತಾ ನಮೂದಿಸಿದ್ದಾರೆ. ಎರಡು ವರ್ಷಗಳಿಂದ ಸರ್ಕಾರಿ ಸೌಲಭ್ಯ ಸಿಗದೇ ಮಹಿಳೆ ಕಣ್ಣೀರು ಹಾಕ್ತಿದ್ದಾಳೆ. ಬಡ ಮಹಿಳೆ ಎನ್ ಹಂಪಮ್ಮಗೆ ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ಸರ್ಕಾರದಿಂದ ಹಣಕಾಸಿನ ಸೌಲಭ್ಯ ಪಡೆಯಲು ತನ್ನ ಜಮೀನು ಕೆಲಸ ಹಾಗೂ ಬ್ಯಾಂಕ್ ಗಳ ಕೆಲಸಕ್ಕೆ, ತಾಲೂಕು ಕಚೇರಿಗಳ ಕೆಲಸಕ್ಕೆ ಅಡಚಣೆ ಉಂಟಾಗಿದೆ. ತನ್ನ ಆಧಾರ್ ಕಾರ್ಡ್ ಸಕ್ರಿಯಗೊಳಿಸಲು ಮನವಿ ಸಲ್ಲಿಸಿದ್ದಾರೆ.
ಸತ್ತಿರುವ ಮಹಿಳೆಯನ್ನ ಜೀವಂತ ಇಟ್ಟು, ಜೀವಂತ ಇರುವ ಬಡ ಮಹಿಳೆಯನ್ನ ಸತ್ತಿದ್ದಾಳೆ ಅಂತ ಕಂದಾಯ ಇಲಾಖೆ ದಾಖಲಾತಿಯಲ್ಲಿ ದಾಖಲಾಗಿದೆ. ಇದು ಸರ್ಕಾರಿ ಅಧಿಕಾರಿ ದಿವ್ಯ ನಿರ್ಲಕ್ಷ್ಯ ಎಷ್ಟಿದೆ ಅನ್ನೋದನ್ನ ಎತ್ತಿ ತೋರಿಸುತ್ತಿದೆ. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಬಡ ಮಹಿಳೆ ಆಧಾರ್ ಸಕ್ರಿಯ ಮಾಡಿಕೊಡ್ತಾರಾ ಕಾದು ನೋಡಬೇಕು.
PublicNext
04/04/2026 10:37 am