ಧಾರವಾಡ: ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆ ಹಿಂಪಡೆಯಬೇಕೆಂದು ಆಗ್ರಹಿಸಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳ ವತಿಯಿಂದ ಏ.10 ರಂದು ಬೆಳಗ್ಗೆ 11:30ಕ್ಕೆ ಬೆಂಗಳೂರಿನ ಪ್ರೀಡಮ್ ಪಾರ್ಕ್ನಲ್ಲಿ ರಾಜ್ಯ ಮಟ್ಟದ ಜನ ಸಮಾವೇಶ ನಡೆಯಲಿದೆ ಎಂದು ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಶಶಿಕಲಾ ಮೇಟಿ ತಿಳಿಸಿದರು.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ಭಾಷಾ ವಿಜ್ಞಾನಿ ಡಾ.ಹಂಪ ನಾಗರಾಜಯ್ಯ, ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ, ಹಿರಿಯ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ, ಡಾ.ಅಲ್ಲಮಪ್ರಭು ಬೆಟ್ಟದೂರು, ರಾಘವೇಂದ್ರ ಕುಷ್ಟಗಿ, ಹೇಮಲತಾ ಮಹಿಷಿ, ನಿರಂಜನಾರಾಧ್ಯ ವಿ.ಪಿ., ಗುರುಪ್ರಸಾದ ಕೆರೆಗೋಡು, ಮಾವಳ್ಳಿ ಶಂಕರ್, ಪ್ರೊ.ಸಬಿಹಾ ಭೂಮಿಗೌಡ, ಬಡಗಲಪುರ ನಾಗೇಂದ್ರ, ಉಗ್ರನರಸಿಂಹ ಪಾಲ್ಗೊಳ್ಳುವರು ಎಂದರು.
ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆ ರಾಜ್ಯದ 40,000 ಸರ್ಕಾರಿ ಶಾಲೆಗಳಿಗೆ ಮರಣಶಾಸನವಾಗಿದೆ. ಎಲ್ಕೆಜಿಯಿಂದ ಪಿಜಿವರೆಗೆ ಒಂದೇ ಸೂರಿನಡಿ 14 ಶಾಲೆಗಳನ್ನು ಆರಂಭಿಸುವುದು ಸರ್ಕಾರದ ಉದ್ದೇಶವಾಗಿದೆ. 5 ರಿಂದ 10 ಕಿ.ಮೀ. ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು ಮುಚ್ಚುವುದೇ ಯೋಜನೆ ಉದ್ದೇಶವಾಗಿದೆ.
ಮುಂದಿನ ದಿನಗಳಲ್ಲಿ ಕೆಪಿಎಸ್ ಶಾಲೆಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಶರಣಬಸವ ಗೋನವಾರ, ಮಲ್ಲೇಶ ಕಟಗಿ, ಶಿಂಧು ಕೌದಿ ಸೇರಿದಂತೆ ಇತರರಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/04/2026 04:29 pm
LOADING...