ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಮದನಪುರ ಗ್ರಾಮದಲ್ಲಿ ಮೈ ನವಿರೇಳಿಸುವ ಘಟನೆಯೊಂದು ನಡೆದಿದ್ದು, ಕುನೋ ರಾಷ್ಟ್ರೀಯ ಉದ್ಯಾನವನದಿಂದ ನಾಡಿಗೆ ನುಗ್ಗಿದ ಚೀತಾವೊಂದನ್ನು ಒಬ್ಬ ವೃದ್ಧ ರೈತ ಧೈರ್ಯದಿಂದ ಓಡಿಸಿದ್ದಾರೆ. ಈ ರೋಚಕ ಮುಖಾಮುಖಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರೈತನ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ರೈತನ ಜಮೀನಿನಲ್ಲಿದ್ದ ಎಮ್ಮೆಗಳ ಮೇಲೆ ದಾಳಿ ಮಾಡಲು ಸಂಚು ಹೂಡಿದ್ದ ಚೀತಾ, ಅನಿರೀಕ್ಷಿತವಾಗಿ ರೈತನ ಎದುರಿಗೆ ಬಂದಿದೆ. ಸಾಮಾನ್ಯವಾಗಿ ಚೀತಾವನ್ನು ಕಂಡರೆ ಜನ ಓಡುತ್ತಾರೆ, ಆದರೆ ಇಲ್ಲಿ ಒಬ್ಬ ವೃದ್ಧ ರೈತ, ಸಾಕ್ಷಾತ್ ಕಾಲಭೈರವನಂತೆ ಚೀತಾದ ಎದುರು ನಿಂತು, ಅದನ್ನು ಯಶಸ್ವಿಯಾಗಿ ಓಡಿಸಿದ್ದಾರೆ. ಕುಟುಂಬ ಸದಸ್ಯರು "ಬೇಡ.. ವಾಪಸ್ ಬನ್ನಿ" ಎಂದು ಕಿರುಚಾಡುತ್ತಿದ್ದರೂ ಲೆಕ್ಕಿಸದ ರೈತ, ಜೋರಾಗಿ ಕೂಗುತ್ತಾ ಚೀತಾವನ್ನೇ ಬೆನ್ನಟ್ಟಿ ಓಡಿಸಿದ್ದಾರೆ. ರೈತನ ಈ ರೌದ್ರಾವತಾರಕ್ಕೆ ಬೆಚ್ಚಿಬಿದ್ದ ಚೀತಾ, ತನ್ನ ಬೇಟೆಯ ಆಸೆಯನ್ನು ತ್ಯಜಿಸಿ ಮತ್ತೆ ಕಾಡಿನತ್ತ ಪಲಾಯನ ಮಾಡಿದೆ. ಸುಗ್ಗಿಯ ಕಾಲದಲ್ಲಿ ತಮ್ಮ ಎಮ್ಮೆಗಳನ್ನು ರಕ್ಷಿಸಲು ಪ್ರಾಣದ ಹಂಗು ತೊರೆದ ರೈತನ ಸಮಯಪ್ರಜ್ಞೆ ಶ್ಲಾಘನೀಯ.
ಈ ಘಟನೆ ಮಾನವ ಮತ್ತು ವನ್ಯಜೀವಿಗಳ ಸಹಬಾಳ್ವೆಯಲ್ಲಿ ಆಗುತ್ತಿರುವ ಬದಲಾವಣೆಗೆ ಸಾಕ್ಷಿಯಾಗಿದೆ. ಹಿಂದೆ ಚೀತಾಗಳ ಮೇಲೆ ಕಲ್ಲು ತೂರುತ್ತಿದ್ದ ಜನ, ಈಗ ಸಂಯಮದಿಂದ ಅವುಗಳನ್ನು ಕಾಡಿಗೆ ಅಟ್ಟುವ ಕಲೆ ಕಲಿಯುತ್ತಿದ್ದಾರೆ. "ಜನರು ಈಗ ವನ್ಯಜೀವಿಗಳ ಜೊತೆ ಬದುಕುವುದನ್ನು ಕಲಿಯುತ್ತಿದ್ದಾರೆ. ಬೊಬ್ಬೆ ಹೊಡೆದರೆ ಚೀತಾಗಳು ದೂರ ಹೋಗುತ್ತವೆ ಎಂಬ ಅರಿವು ಮೂಡುತ್ತಿರುವುದು ಸಂತಸದ ವಿಷಯ" ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ 'ಜ್ವಾಲಾ' ಚೀತಾ 5 ಮರಿಗಳಿಗೆ ಜನ್ಮ ನೀಡಿದ್ದು, ಭಾರತದಲ್ಲಿ ಚೀತಾಗಳ ಸಂಖ್ಯೆ ಇದೀಗ 53 ಕ್ಕೆ ಏರಿಕೆಯಾಗಿರುವುದು ಈ ಸಂದರ್ಭದಲ್ಲಿ ಗಮನಾರ್ಹವಾಗಿದೆ.
PublicNext
07/04/2026 05:36 pm