ಧಾರವಾಡ : ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ಹೆಚ್ಚಿನ ಬಸ್ ಸೌಲಭ್ಯ ಇಲ್ಲದೇ ಬಸ್ ನಿಲ್ದಾಣದಲ್ಲಿ ನೂಕು ನುಗ್ಗಲು ಉಂಟಾಗುತ್ತಿದೆ. ಬಸ್ ಹತ್ತುವಾಗ ಜನರು ಓಡೋಡಿ ಬಂದು ಬಸ್ ಹತ್ತಲು ಹರಸಾಹಸ ಪಡುತ್ತಿದ್ದು, ಜನರು ಪರದಾಡುವ ಸ್ಥಿತಿ ಸದ್ಯದಲ್ಲಿದೆ. ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸಾರಿಗೆ ಇಲಾಖೆ ಉತ್ತರಿಸಬೇಕಿದೆ.
ಹೌದು... ಸವದತ್ತಿ ಬಸ್ ನಿಲ್ದಾಣದಲ್ಲಿ ಹಾಗೂ ಧಾರವಾಡ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಕೊರತೆಯಿಂದ ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ತೆರಳುವ ಜನರು ಗಂಟೆಗಟ್ಟಲೆ ಕಾಯುವಂತಾಗಿದೆ. ಸಾರಿಗೆ ಅಧಿಕಾರಿಗಳು ಮಾತ್ರ ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.
ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ತೆರಳುವ ಹಾಗೂ ಮರಳಿ ಧಾರವಾಡಕ್ಕೆ ಬರುವ ಬಸ್ ಗಳು ಪ್ರತಿನಿತ್ಯ ಹೌಸ್ ಫುಲ್ ಆಗಿ ಹೋಗುತ್ತದೆ. ಹೆಚ್ಚಿನ ಬಸ್ ಸೌಲಭ್ಯ ಇಲ್ಲದೇ ಜನರು ಬಸ್ ನಲ್ಲಿ ಸಂಚಾರ ಮಾಡಲು ಪರದಾಡುವ ಸ್ಥಿತಿ ಸದ್ಯ ಇದೆ. ಅದರಂತೆಯೇ ಬಸ್ ನಲ್ಲಿ ಸೀಟು ಹಿಡಿಯುವ ಆತುರದಲ್ಲಿ ಬಸ್ ಹತ್ತುವಾಗ ಪ್ರಯಾಣಿಕರು ನೂಕುನುಗ್ಗಲು ಅನುಭವಿಸುತ್ತಿದ್ದಾರೆ.
ಹೆಚ್ಚುವರಿ ಬಸ್ ಗಳನ್ನು ಧಾರವಾಡದಿಂದ ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ಬಿಡುವಂತೆ ಅದೆಷ್ಟೋ ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಪ್ರಯಾಣಿಕರು. ಈ ಕುರಿತು ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಲು ಸಾರಿಗೆ ಅಧಿಕಾರಿಗಳು ವಿಫಲರಾಗಿದ್ದಾರೆ.
ಈ ಕುರಿತು ಗಂಭೀರವಾಗಿ ಪರಿಗಣಿಸಿ ಕೂಡಲೇ ಹೆಚ್ಚುವರಿ ಬಸ್ ಗಳನ್ನು ಸವದತ್ತಿ ಯಲ್ಲಮ್ಮ ಗುಡ್ಡಕ್ಕೆ ಬಿಡಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.
ವರದಿ: ಮಂಜುನಾಥ ಕವಳಿ ಪಬ್ಲಿಕ್ ನೆಕ್ಸ್ಟ್ ಧಾರವಾಡ.
Kshetra Samachara
14/04/2026 09:35 pm
LOADING...