ಶಿವಮೊಗ್ಗ : ಬಿರುಗಾಳಿ ಮತ್ತು ಮಳೆಯಿಂದ ಹಾನಿಗೊಳಗಾದ ಅಡಿಕೆ, ತೆಂಗು ತೋಟ ಸೇರಿದಂತೆ ಬೆಳೆ ಹಾನಿಯಾದ ರೈತರಿಗೆ ಮತ್ತು ಮನೆ ಕಳೆದುಕೊಂಡವರಿಗೆ ತಕ್ಷಣವೇ ಸೂಕ್ತ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅರಹತೊಳಲು ಗ್ರಾಮದ ತೋಟಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಬಿರುಗಾಳಿ, ಮಳೆಗೆ ಹಾನಿಗೊಳಗಾದ ಬೆಳೆ ಮತ್ತು ಮನೆಗಳ ಮಹಜರ್ ನ್ನು ಶೀಘ್ರದಲ್ಲೇ ಕೈಗೊಂಡು ಸಲ್ಲಿಸಲು ತಿಳಿಸಿದ್ದೇನೆ. ವಿದ್ಯುತ್ ಕಡಿತವಾಗಿ ಕುಡಿಯುವ ನೀರಿಗೆ ತೊಂದರೆಯಾಗಿದ್ದು ತಕ್ಷಣವೇ ಕುಡಿಯುವ ನೀರು ಮತ್ತು 36 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಮೆಸ್ಕಾಂಗೆ ಸೂಚನೆ ನೀಡಿದ್ದೇನೆ.
ಅರಹತೊಳಲಿನಲ್ಲಿ ಓರ್ವ ವ್ಯಕ್ತಿ ಸಾವು ಆಗಿದ್ದು ಕಾರಣ ತಿಳಿದು ವರದಿ ನೀಡಲು ಸೂಚನೆ ನೀಡಿದ್ದೇನೆ.
ನಷ್ಟದ ಕುರಿತು ಸಮಗ್ರ ವರದಿ ನೀಡುವಂತೆ ಕಂದಾಯ ಇಲಾಖೆ, ಗ್ರಾ.ಪಂ. ವಿಪತ್ತು ನಿರ್ವಹಣೆ ಇಲಾಖೆ ಸೇರಿದಂತೆ ಸಮನ್ವಯ ಸಾಧಿಸಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ.
ನಾನು ಖುದ್ದಾಗಿ ಹಾನಿಗೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ.
ವಡ್ಡರಹಟ್ಟಿ ಭಾಗದ ಹಲವು ಮನೆಗಳಿಗೆ ಇದುವರೆಗೆ ಗ್ರಾ.ಪಂ. ಯಿಂದ ಹಕ್ಕುಪತ್ರ ಲಭ್ಯವಾಗಿಲ್ಲ ಹಕ್ಕುಪತ್ರ ನೀಡುವಂತೆ ಮನವಿಮಾಡಿದ್ದು ಈ ಕುರಿತು ಅಧಿಕಾರಿಗಳಿಗೆ ಪರಿಶೀಲಿಸಿ ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಮಳೆಗಾಲದಲ್ಲಿ ಮನೆ ಸುತ್ತ ಮುತ್ತ ದುರ್ಬಲ ಮರಗಳು, ಮನೆಗಳ ಶೀಟ್ ಚಾವಣಿಗಳ ಬಗ್ಗೆ ಸಾರ್ವಜನಿಕರು ಸಹ ಎಚ್ಚರಿಕೆ ವಹಿಸಬೇಕು. ಆಗ ಅದರಿಂದಾಗುವ ಅನಾಹುತ ತಪ್ಪಿಸಬಹುದೆಂದು ತಿಳಿಸಿದರು.
ಮಳೆಯಿಂದ ಮನೆ ಕಳೆದುಕೊಂಡವರಿಗೆ ಮತ್ತು ಬೆಳೆ ಹಾನಿಯಾದ ರೈತರಿಂದ ಮಾಹಿತಿ ಪಡೆದು ವರದಿ ತಯಾರಿಸಿ, ತಕ್ಷಣವೇ ಸೂಕ್ತ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ತಹಶೀಲ್ದಾರರಿಗೆ ಸ್ಥಳದಲ್ಲೇ ಸೂಚನೆ ನೀಡಿದರು. ಯಾವುದೇ ವಿಳಂಬವಿಲ್ಲದೆ ವೈಜ್ಞಾನಿಕವಾಗಿ ಹಾನಿ ಸಮೀಕ್ಷೆ ನಡೆಸಲು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
PublicNext
28/04/2026 04:47 pm