ಹಿರಿಯಡ್ಕ: ಮಣ್ಣು ಕುಸಿದು ಬಾವಿಗೆ ಬಿದ್ದ ಪರಿಣಾಮ ಓರ್ವ ಮೃತಪಟ್ಟ ಘಟನೆ ದೊಂಡರಂಗಡಿ ಎಂಬಲ್ಲಿ ನಡೆದಿದೆ.
ಮೃತರನ್ನು ಕೇಶವ ಎಂದು ಗುರುತಿಸಲಾಗಿದೆ. ಬಾವಿಗೆ ಕಲ್ಲು ಕಟ್ಟುವ ಕೆಲಸ ಮಾಡಿಕೊಂಡಿದ್ದ ಬೈರಂಪಳ್ಳಿ ಗ್ರಾಮದ ಹರೀಶ್ ಎಂಬವರು ಕೆಲಸದವರೊಂದಿಗೆ ದೊಂಡರಂಗಡಿಯಲ್ಲಿರುವ ಚಂದ್ರಕಾಂತ್ ಕಿಣಿ ಎಂಬವರ ಬಾವಿಯ ಕೆಲಸವನ್ನು ನೋಡಲು ಹೋಗಿದ್ದರು. ಅಲ್ಲಿ ಬಾವಿಯ ಹತ್ತಿರ ಹೋಗಿ ಇಣುಕಿ ನೋಡಿದಾಗ ಬಾವಿಯ ಬಳಿ ನಿಂತ ಜಾಗದ ಮಣ್ಣು ಒಮ್ಮೆಲೇ ಕುಸಿಯಿತ್ತೆನ್ನಲಾಗಿದೆ. ಇದರಿಂದ ಹರೀಶ್, ಕೇಶವ ಹಾಗೂ ಸುಧಾಕರ ಎಂಬವರು ಬಾವಿಗೆ ಬಿದ್ದರು.
ಅವರಲ್ಲಿ ಹರೀಶ್ ಅಲ್ಲಿಯೇ ಪಂಪಿಗೆ ಅಳವಡಿಸಿದ ಹಗ್ಗದ ಸಹಾಯದಿಂದ ಮೇಲೆ ಬಂದರು. ಅದೇ ರೀತಿ ಸುಧಾಕರ ನೀರಿನಿಂದ ಮೇಲಕ್ಕೆ ಎದ್ದು ಬಾವಿಯಲ್ಲಿದ್ದ ಏಣಿಯಿಂದ ಮೇಲಕ್ಕೆ ಬಂದರು. ಆದರೆ ಕೇಶವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿ ಕೇಶವ ಅವರ ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
30/04/2026 10:29 am
LOADING...