ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದಲ್ಲಿ ಭಾರೀ ಸಂಚಲನ ಉಂಟಾಗಿದ್ದು, ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯ ಡಿ.ಎನ್. ಜೀವರಾಜ್ ಅವರು ಐತಿಹಾಸಿಕ ಜಯ ಸಾಧಿಸಿದ್ದಾರೆ. 2023ರ ಚುನಾವಣೆಯಲ್ಲಿ ಕೇವಲ 201 ಮತಗಳ ಅಂತರದಿಂದ ಕಾಂಗ್ರೆಸ್ಸಿನ ರಾಜೇಗೌಡರು ಗೆಲುವು ದಾಖಲಿಸಿದ್ದರು, ಆದರೆ ಮೂರು ವರ್ಷಗಳ ಸುದೀರ್ಘ ಕಾನೂನು ಹೋರಾಟ ಮತ್ತು ಮರು ಎಣಿಕೆಯ ನಂತರ ಫಲಿತಾಂಶವು ಜೀವರಾಜ್ ಪರವಾಗಿ ಬಂದಿದೆ. 2026ರ ಈ ಮರು ಎಣಿಕೆಯ ಸಂದರ್ಭದಲ್ಲಿ ರಾಜೇಗೌಡರು ಪಡೆದಿದ್ದ 569 ಅಂಚೆ ಮತಗಳ ಪೈಕಿ 318 ಮತಗಳು ಅಸಿಂಧು ಎಂದು ಘೋಷಿತವಾದ ಹಿನ್ನೆಲೆಯಲ್ಲಿ, ಡಿ.ಎನ್. ಜೀವರಾಜ್ ಅವರು 52 ಮತಗಳ ಅಂತರದಿಂದ ಗೆಲುವು ಪಡೆದುಕೊಂಡಿದ್ದಾರೆ.
ಈ ಅನಿರೀಕ್ಷಿತ ವಿಜಯದೊಂದಿಗೆ ಜೀವರಾಜ್ ಅವರು ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾದಂತಾಗಿದ್ದು, ಚುನಾವಣಾಧಿಕಾರಿಗಳಿಂದ ಅಧಿಕೃತವಾಗಿ ಪ್ರಮಾಣ ಪತ್ರವನ್ನು ಸ್ವೀಕರಿಸಿದ್ದಾರೆ. ಈ ಬೆಳವಣಿಗೆಯಿಂದ ಎನ್.ಆರ್.ಪುರ, ಕೊಪ್ಪ ಮತ್ತು ಶೃಂಗೇರಿ ತಾಲೂಕುಗಳಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಎನ್.ಆರ್.ಪುರದ ಬಸ್ ನಿಲ್ದಾಣದ ವೃತ್ತದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗುತ್ತಾ ವಿಜಯೋತ್ಸವ ಆಚರಿಸುತ್ತಿದ್ದಾರೆ. ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಈ ಮರು ಎಣಿಕೆ ಪ್ರಕ್ರಿಯೆ ಮತ್ತು ಜೀವರಾಜ್ ಅವರ ಈ ಮರಳುವಿಕೆ ಅತ್ಯಂತ ಮಹತ್ವದ ತಿರುವು ಎಂದು ಬಣ್ಣಿಸಲಾಗುತ್ತಿದೆ.
PublicNext
04/05/2026 01:16 pm
LOADING...