ಅಸನ್ಸೋಲ್: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಭಾರತೀಯ ಜನತಾ ಪಾರ್ಟಿ (BJP) ಭರ್ಜರಿ ಬಹುಮತದತ್ತ ಮುನ್ನುಗ್ಗುತ್ತಿದೆ. ಈ ಐತಿಹಾಸಿಕ ಗೆಲುವಿನ ನಡುವೆ ಬರಬಾನಿ (Barabani) ಕ್ಷೇತ್ರದ ಬಿಜೆಪಿ ಕಾರ್ಯಕರ್ತನೊಬ್ಬ ಕ್ಯಾಮೆರಾ ಮುಂದೆ ಬಿಕ್ಕಿ ಬಿಕ್ಕಿ ಅತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬರಬಾನಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತ ಸುಜಯ್ ಗೋರಾಯ್, ತಮ್ಮ ಪಕ್ಷದ ಅಭ್ಯರ್ಥಿ ಅರಿಜಿತ್ ರಾಯ್ ಅವರ ಗೆಲುವಿನ ಸುದ್ದಿ ಕೇಳುತ್ತಿದ್ದಂತೆ ಭಾವುಕರಾದರು. ಈ ಹಿಂದೆ ನಡೆದ ಚುನಾವಣೆಗಳ ನಂತರ ಟಿಎಂಸಿ (TMC) ಕಾರ್ಯಕರ್ತರು ತಮ್ಮ ಮೇಲೆ ನಡೆಸಿದ್ದ ದೌರ್ಜನ್ಯಗಳನ್ನು ನೆನೆದು ಅವರು ಕಣ್ಣೀರಿಟ್ಟರು.
"ಹಿಂದಿನ ಚುನಾವಣೆಗಳ ನಂತರ ಟಿಎಂಸಿ ಕಾರ್ಯಕರ್ತರು ನಮ್ಮನ್ನು ಮನಬಂದಂತೆ ಹೊಡೆದಿದ್ದರು. ನಾವು ಪ್ರಾಣ ಉಳಿಸಿಕೊಳ್ಳಲು ಮನೆ ಬಿಟ್ಟು ಓಡಿ ಹೋಗಬೇಕಾಗಿತ್ತು. ತಿಂಗಳುಗಟ್ಟಲೆ ನಮ್ಮ ಸ್ವಂತ ಮನೆಯಿಂದ ದೂರ ಉಳಿದಿದ್ದೆವು. ಇಂದು ನಮಗೆ ನ್ಯಾಯ ಸಿಕ್ಕಿದೆ," ಎಂದು ಸುಜಯ್ ಗೋರಾಯ್ ಅಳುತ್ತಲೇ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬರಬಾನಿ ಕ್ಷೇತ್ರವು ದೀರ್ಘಕಾಲದಿಂದ ತೃಣಮೂಲ ಕಾಂಗ್ರೆಸ್ನ ಬಿಧಾನ್ ಉಪಾಧ್ಯಾಯ ಅವರ ವಶದಲ್ಲಿತ್ತು. ಆದರೆ ಈ ಬಾರಿ ಬಿಜೆಪಿಯ ಅರಿಜಿತ್ ರಾಯ್ ಅವರು ಟಿಎಂಸಿ ಕೋಟೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ಯದಲ್ಲಿ ಕೇಳಿಬಂದ ಸಾಲು ಸಾಲು ಹಗರಣಗಳು ಮತ್ತು ರಾಜಕೀಯ ಹಿಂಸಾಚಾರದ ವಿರುದ್ಧ ಮತದಾರರು ಬಿಜೆಪಿಯ ಕೈಹಿಡಿದಿರುವುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ.
ಸುಜಯ್ ಗೋರಾಯ್ ಅವರ ಈ ಭಾವುಕ ವಿಡಿಯೋಗೆ ನೆಟ್ಟಿಗರು ಸಾಲು ಸಾಲು ಕಮೆಂಟ್ ಮಾಡುತ್ತಿದ್ದಾರೆ. "ಬಿಜೆಪಿ ಕಾರ್ಯಕರ್ತರ ತಾಳ್ಮೆ ಮತ್ತು ಹೋರಾಟಕ್ಕೆ ಸಂದ ಜಯವಿದು" ಎಂದು ಅನೇಕರು ಶ್ಲಾಘಿಸಿದ್ದಾರೆ. ಇನ್ನು ಕೆಲವರು, "ಹಿಂದೆ ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.
PublicNext
04/05/2026 10:34 pm