ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಗೊಂದಲ ಮತ್ತು ಅಧಿಕಾರಿಗಳ ಲೋಪದೋಷಗಳು ಬೆಳಕಿಗೆ ಬಂದಿವೆ. 2023ರ ಚುನಾವಣೆಯಲ್ಲಿ ಸಿಂಧು ಎಂದು ಪರಿಗಣಿಸಲಾಗಿದ್ದ ಅಂಚೆ ಮತಗಳು, ಈಗ 2026ರ ಮರು ಎಣಿಕೆಯಲ್ಲಿ ಅಸಿಂಧು ಎಂದು ಸಾಬೀತಾಗಿರುವುದು ಚುನಾವಣಾ ವೀಕ್ಷಕರು ಮತ್ತು ಅಧಿಕಾರಿಗಳಲ್ಲಿ ಅಚ್ಚರಿ ಮೂಡಿಸಿದೆ.
ಚುನಾವಣಾ ಆಯೋಗದ ವೀಕ್ಷಕ ಕಿರಣ್ ಕುಲಕರ್ಣಿ ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದು, 2023ರ ಮತ ಎಣಿಕೆ ಸಂದರ್ಭದಲ್ಲಿ ನಿಯಮಗಳ ಉಲ್ಲಂಘನೆಯಾಗಿರುವುದನ್ನು ಉಲ್ಲೇಖಿಸಿದ್ದಾರೆ. ಮುಖ್ಯವಾಗಿ, ಮತ ಎಣಿಕೆಯ ಆರಂಭದಲ್ಲಿಯೇ ಅಂಚೆ ಮತಗಳನ್ನು ಎಣಿಸಬೇಕೆಂಬ ನಿಯಮವನ್ನು ಅಂದು ಪಾಲಿಸಿರಲಿಲ್ಲ. ಅಲ್ಲದೇ, ಅಸಿಂಧುಗೊಂಡ ಮತಗಳಿಗೆ ಸ್ಪಷ್ಟ ಕಾರಣಗಳನ್ನು ನೀಡುವಲ್ಲಿ ಅಂದಿನ ಅಧಿಕಾರಿಗಳು ವಿಫಲರಾಗಿದ್ದಾರೆ. ಶಾಸಕ ರಾಜೇಗೌಡ ಅವರು 201 ಮತಗಳ ಅಂತರದಿಂದ ಜಯಗಳಿಸಿದ್ದರು, ಆದರೆ ಅಂದು ತಿರಸ್ಕೃತಗೊಂಡಿದ್ದ ಮತಗಳ ಸಂಖ್ಯೆ 279 ಆಗಿತ್ತು. ನಿಯಮದ ಪ್ರಕಾರ, ಗೆಲುವಿನ ಅಂತರಕ್ಕಿಂತ ತಿರಸ್ಕೃತ ಮತಗಳ ಸಂಖ್ಯೆ ಹೆಚ್ಚಿದ್ದಾಗ ಮರು ಎಣಿಕೆ ನಡೆಸಬೇಕಿತ್ತು, ಆದರೆ ಅಂದಿನ ಅಧಿಕಾರಿಗಳು ಇದನ್ನು ನಿರ್ಲಕ್ಷಿಸಿದ್ದರು. ಅಂದು ಸಿಂಧು ಮತಗಳಿಗೆ ಸಹಿ ಮಾಡಿದ್ದ ಚುನಾವಣಾ ಅಧಿಕಾರಿಗಳ ನಡೆ ಈಗ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಈ ಗಂಭೀರ ಲೋಪಕ್ಕೆ ಸಂಬಂಧಿಸಿದಂತೆ ಅಂದಿನ ಚುನಾವಣಾಧಿಕಾರಿ ವೇದಾಮೂರ್ತಿ ಮತ್ತು ಜಿಲ್ಲಾಧಿಕಾರಿ ರಮೇಶ್ ಕುಮಾರ್ ಅವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಯುವ ಸಾಧ್ಯತೆಯಿದೆ. 2023ರ ಎಣಿಕೆ ಪ್ರಕ್ರಿಯೆಯ ಸಂಪೂರ್ಣ ವಿಡಿಯೋ ದೃಶ್ಯಾವಳಿಗಳನ್ನು ಈಗಾಗಲೇ ಚುನಾವಣಾ ಆಯೋಗ ಮತ್ತು ನ್ಯಾಯಾಲಯಕ್ಕೆ ರವಾನಿಸಲಾಗಿದೆ.
PublicNext
05/05/2026 01:29 pm
LOADING...