ಬೆಂಗಳೂರು: ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿಲುವನ್ನು ಕರ್ನಾಟಕದ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪತ್ರಿಕೆ ಸೋರಿಕೆ ಸಣ್ಣ ಪ್ರಮಾಣದಲ್ಲಿ ನಡೆದಿದ್ದರೂ ಅದು ಇಡೀ ವ್ಯವಸ್ಥೆಯ ಮೇಲಿರುವ ನಂಬಿಕೆಯನ್ನು ಧ್ವಂಸಗೊಳಿಸುತ್ತದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
"ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ದೇಶದ ಪ್ರಾಮಾಣಿಕ, ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಭಾರಿ ಆರ್ಥಿಕ ಹಾಗೂ ಮಾನಸಿಕ ಹೊರೆಯಾಗುತ್ತಿದೆ. ಅರ್ಹತೆಯ ಆಧಾರದ ಮೇಲೆ ಸಿಗಬೇಕಾದ ಸುವರ್ಣಾವಕಾಶಗಳನ್ನು ಇಂತಹ ಅಕ್ರಮಗಳು ಕಸಿದುಕೊಳ್ಳುತ್ತಿವೆ" ಎಂದು ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಸಂಸತ್ತಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಅಧಿಕಾರಿಗಳು ನೀಡಿದ್ದಾರೆ ಎನ್ನಲಾದ ಹೇಳಿಕೆಯ 'ಬಿಸಿನೆಸ್ ಟುಡೇ' (Business Today) ಸ್ಕ್ರೀನ್ಶಾಟ್ ಒಂದನ್ನು ಹಂಚಿಕೊಂಡಿರುವ ಅವರು ಕೇಂದ್ರದ ಉಡಾಫೆಯನ್ನು ಪ್ರಶ್ನಿಸಿದ್ದಾರೆ. ಆ ಸ್ಕ್ರೀನ್ಶಾಟ್ನಲ್ಲಿ NTA ಅಧಿಕಾರಿಗಳು, "ಯಾವುದೇ ಪೇಪರ್ ಲೀಕ್ ಆಗಿಲ್ಲ, ಕೇವಲ ಕೆಲವು ಪ್ರಶ್ನೆಗಳು ಮಾತ್ರ ಹೊರಬಂದಿವೆ" ಎಂದು ಸಮರ್ಥಿಸಿಕೊಂಡಿರುವುದನ್ನು ಖರ್ಗೆ ತೀವ್ರವಾಗಿ ಖಂಡಿಸಿದ್ದಾರೆ. "ಕೆಲವು ಪ್ರಶ್ನೆಗಳು ಹೊರಬಂದಿರುವುದೇ ಪೇಪರ್ ಲೀಕ್ ಅಲ್ವೇ?" ಎನ್ನುವುದು ಸಚಿವರ ವಾದವಾಗಿದೆ.
PublicNext
27/05/2026 09:05 am
LOADING...