ಬಳ್ಳಾರಿ : ತಾಲೂಕು ವ್ಯಾಪ್ತಿಯ ಎಲ್ ಎಲ್ ಸಿ ಕಾಲುವೆಯ ಬಳಿ ಯುವಕನನ್ನು ಹತ್ಯೆಗೈದು ದುಷ್ಕರ್ಮಿಗಳು ಸಾಕ್ಷ್ಯನಾಶ ಮಾಡುವ ಉದ್ದೇಶದಿಂದ ಮೃತ ದೇಹವನ್ನು ಬರೋಬ್ಬರಿ 13 ಕಿಲೋಮೀಟರ್ ದೂರದವರೆಗೆ ಕೊಂಡೊಯ್ದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಮೃತಪಟ್ಟ ಯುವಕ ಅನಂತಪುರ ಜಿಲ್ಲೆಯ ವ್ಯಾಪ್ತಿಯ ಬೊಲ್ಲನಗುಡ್ಡಂ ಪ್ರದೇಶದ ನಿವಾಸಿ ಬಸವನಗೌಡ (27) ಎಂದು ಗುರುತಿಸಲಾಗಿದೆ.
ಪಕ್ಕಾ ಪ್ಲಾನ್ ಮಾಡಿ ಮೃತದೇಹಕ್ಕೆ ಬೆಂಕಿ ಹಚ್ಚಿದ್ದರೂ ಶನಿವಾರ ಸುರಿದ ಮಳೆಯಿಂದಾಗಿ ಬೆಂಕಿ ನಂದಿಹೋಗಿದ್ದು, ಶವವು ಅರ್ಧಂಬರ್ಧ ಸುಟ್ಟುಹೋಗಿ ಘಟನೆ ಬೆಳಕಿಗೆ ಬಂದಿದೆ ಘಟನಾ ಸ್ಥಳದಲ್ಲಿ ದೊರೆತ ಸುಳಿವು ಹಾಗೂ ಹತ್ಯೆ ನಡೆದ ರೀತಿಯನ್ನು ಗಮನಿಸಿದರೆ ಇದು ಪ್ರೀತಿ ಪ್ರೇಮ ವಿಷಯಕ್ಕೆ ಸಂಬಂಧಿಸಿದ್ದು ಎನ್ನಲಾಗ್ತಿದೆ.
ಎಲ್ ಎಲ್ ಸಿ ಕಾಲುವೆ ಬಳಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ, ಅರ್ಧ ಸುಟ್ಟು ಕರಕಲಾದ ಮೃತದೇಹದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ನಡೆಸಿದಾಗ, ಮೃತದೇಹ ದೊರೆತ ಸ್ಥಳದಿಂದ 13 ಕಿಲೋಮೀಟರ್ ದೂರದಲ್ಲಿ ಮೃತ ಯುವಕನಿಗೆ ಸೇರಿದ ಪಲ್ಸರ್ ಬೈಕ್, ಚಪ್ಪಲಿಗಳು ದೊರಕಿವೆ.
ಮೃತ ಯುವಕ ಬಳ್ಳಾರಿಯ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಬಸವನಗೌಡ ಅವರದ್ದು ಎಂದು ದೃಢಪಡಿಸಿದ್ದಾರೆ. ಈ ಕುರಿತು ಮೋಕಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
PublicNext
09/06/2026 05:31 pm
LOADING...