ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮುರು : ಪಟ್ಟಣದಲ್ಲಿ ನಡೆದ ರೈತರ ಕುಂದು ಕೊರತೆ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದ ರೈತರು !

ಮೊಳಕಾಲ್ಮುರು : ತಾಲ್ಲೂಕಿನ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬುಧವಾರ ತಾಲ್ಲೂಕು ಕಚೇರಿಯಲ್ಲಿ ಜಿಲ್ಲಾ ಉಪ ವಿಭಾಗಾಧಿಕಾರಿ ಕಾಂತರಾಜ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಕುಂದುಕೊರತೆ ಸಭೆಯನ್ನು ರೈತಸಂಘದ ಕಾರ್ಯಕರ್ತರು ಬಹಿಷ್ಕರಿಸಿ ಕೆಲಕಾಲ ಘೋಷಣೆ ಕೂಗಿ ಪ್ರತಿಭಟಿಸಿದರು.ಹಲವು ಸಲ ತಾಲ್ಲೂಕಿನ ರೈತರ ಸಮಸ್ಯೆಗಳನ್ನು ಮುಂದಿಟ್ಟು ಪ್ರತಿಭಟನೆಗಳನ್ನು ನಡೆಸಿದ ಪರಿಣಾಮ ಈ ಕುಂದುಕೊರತೆ ಸಭೆ ಕರೆಯಲಾಗಿದೆ.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸುವಂತೆ ಮನವಿ ಮಾಡಲಾಗಿತ್ತು. ಆದರೆ ಸಭೆಯಲ್ಲಿ ಅವರು ಭಾಗವಹಿಸಿಲ್ಲ ಮತ್ತು ಪ್ರಮುಖವಾಗಿ ನಿಯೋಜನೆ ಮೇರೆಗೆ ಬಂದಿರುವ ತಹಶೀಲ್ದಾರ್ ಸಹ ಸಭೆಗೆ ಬಂದಿಲ್ಲ. ಇದರಿಂದ ಯಾತಕ್ಕಾಗಿ ಸಭೆ ಮಾಡಬೇಕು ಎಂದು ದೂರಿ ಸಭೆಯಿಂದ ರೈತರು ಹೊರ ನಡೆದರು.

ಫಸಲ್ ಬಿಮಾ ಯೋಜನೆಯಲ್ಲಿ ತಾಲ್ಲೂಕಿಗೆ ತೀವ್ರ ಅನ್ಯಾಯವಾಗಿದೆ ಎಂಬ ಬಗ್ಗೆ ಚರ್ಚೆ ನಡೆಸಬೇಕಾಗಿತ್ತು. ಆದರೆ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರು ಸಭೆಗೆ ಬಂದಿಲ್ಲ. 13 ಇಲಾಖೆಗಳ ಪೈಕಿ 4-5 ಇಲಾಖೆ ಅಧಿಕಾರಿಗಳು ಮಾತ್ರ ಬಂದಿದಾ ಇದೊಂದು ತೋರಿಕೆ ಸಭೆ ಅಷ್ಟೇ ಇದರಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ ಸಭೆ ಖರ್ಚು, ವೆಚ್ಚ ವ್ಯರ್ಥ ಎಂದು ದೂರಿದರು.

ಪ್ರತಿ ಸಲವೂ ರೈತರ ಒತ್ತಡ ಹೆಚ್ಚಾದಾಗ ಜಿಲ್ಲಾಡಳಿತ ಚರ್ಚಿಸಲು ಸಭೆ ಹಮ್ಮಿಕೊಳ್ಳುತ್ತದೆ, ಸಭೆಗೆ ಜಿಲ್ಲಾಧಿಕಾರಿ ಸೇರಿದಂತೆ ಪ್ರಮುಖ ಅಧಿಕಾರಿಗಳು ಗೈರಾಗುತ್ತಾರೆ.ಎಫ್‌ಐಡಿ ಇದ್ದರೆ ಮಾತ್ರ ಪ್ರತಿ ರೈತರಿಗೆ 2 ಚೀಲ ರಸಗೊಬ್ಬರ ನೀಡಲಾಗುತ್ತಿದೆ. ಈ ಮಾನದಂಡ ತೆಗೆದು ಅಗತ್ಯದಷ್ಟು ನೀಡಲು ಕ್ರಮ ಕೈಗೊಳ್ಳಬೇಕು. ಬಿತ್ತನೆ ಶೇಂಗಾ ಬೀಜ ದರ ಕಡಿಮೆ ಮಾಡಬೇಕು. ಪಟ್ಟಣದಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಹಾಗೂ ಡಿಪೋ ಉದ್ಘಾಟಿಸುವ ಮೂಲಕ ವಿದ್ಯಾರ್ಥಿಗಳ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮರ್ಲಹಳ್ಳಿ ರವಿಕುಮಾರ್. ಟಿ. ಚಂದ್ರಣ್ಣ, ಪಿ.ಟಿ.ಹಳ್ಳಿ ನಿಂಗಣ್ಣ ಪಿ. ಮಹೇಶ್. ಪಿ.ಟಿ. ಹಟ್ಟಿ ಈರಣ್ಯ, ಮೇಸ್ತ್ರಿ, ಪಾವಯ್ಯ ಶ್ರೀನಿವಾಸ ಮೂರ್ತಿ ಇದ್ದರು.

Edited By : PublicNext Desk
PublicNext

PublicNext

10/06/2026 07:45 pm

Cinque Terre

10.66 K

Cinque Terre

0

ಸಂಬಂಧಿತ ಸುದ್ದಿ