ಗುಂಡ್ಲುಪೇಟೆ : ಶುಕ್ರವಾರ (ಇಂದು) ಬಂಡೀಪುರದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಬೋಳಗುಡ್ಡದ ಸಮೀಪ ಹುಲಿ, ಚಿರತೆ , ಕರಡಿಗಳ ದರ್ಶನವಾಗಿದೆ, ಇತ್ತೀಚೆಗಂತೂ ಪ್ರವಾಸಿಗರ ಆಕರ್ಷಣಾ ಕೇಂದ್ರ ಬಿಂದುವಾಗಿರುವ ಬಂಡೀಪುರ ಅಭಯಾರಣ್ಯದಲ್ಲಿ ಸ್ವಚ್ಛಂದವಾಗಿ ವಿಹರಿಸುವ ವನ್ಯಜೀವಿಗಳ ಪ್ರತ್ಯಕ್ಷದರ್ಶನ ಸಫಾರಿ ಪ್ರಿಯರನ್ನು ತಮ್ಮತ್ತ ತಿರುಗಿನೋಡುವಂತೆ ಮಾಡಿದೆ.
ಸೊಂಪಾಗಿ ಸುರಿದ ವರುಣನ ಕೃಪೆಯಿಂದ ಬಿಸಿಲ ಬೇಗೆಗೆ ಬಸವಳಿದಿದ್ದ ಬಂಡೀಪುರವೀಗ ಹಸಿರಿನ ಮೈಸಿರಿ ಹೊದ್ದು ನಿಂತಿದೆ, ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆಯನ್ನು ಕ್ರಮೇಣವಾಗಿ ದುಪ್ಪಟ್ಟುಗೊಳ್ಳುವಂತೆ ಮೈನೇರಳಿಸುವ ವನ್ಯಜೀವಿಗಳ ದರ್ಶನ ಜೊತೆಗೆ ಹಸಿರು ಕಾನನದ ನಡುವೆ ಸಿಗುವ ಆಹ್ಲಾದಕರ ಅನುಭವಕ್ಕೆ ವನ್ಯಜೀವಿಪ್ರಿಯರು ಸೋತು ಹೋಗಿದ್ದಾರೆ. ಬೆಳ್ಳಂಬೆಳಗ್ಗೆ ಸಫಾರಿಗೆ ಹೊರಟವರಿಗೆ ಬೋಳಗುಡ್ಡದ ಸಮೀಪ ಮರಿಗಳನ್ನು ತನ್ನ ಬೆನ್ನ ಮೇಲಿರಿಸಿ ಮುಂದೆ ಸಾಗುವ ಕರಡಿ ಹಾಗೂ ಗಾಂಭೀರ್ಯದ ಹೆಜ್ಜೆ ಹಾಕುತ್ತ ಖಡಕ್ ಲುಕ್ ನೀಡಿ ಮುಂದೆ ಸಾಗಿದ ಹುಲಿಯ ದೃಶ್ಯಗಳು ಪ್ರವಾಸಿಗರ ಹುಬ್ಬೇರಿಸಿವೆ. ಸಫಾರಿ ಮಾರ್ಗದ ಹಲವೆಡೆ ಹುಲಿಗಳ ದರ್ಶನವಾಗುತ್ತಿದ್ದು ಕೆರೆಯ ಬಳಿ ಮರಿಗಳೊಟ್ಟಿಗೆ ತಾಯಿ ಹುಲಿ ವಿಶ್ರಮಿಸುವ ದೃಶ್ಯಾವಳಿಗಳು ಸಹ ಅನೇಕ ಬಾರಿ ಸೆರೆಯಾಗಿದ್ದು ಮತ್ತೇ ಬಂಡೀಪುರದಲ್ಲಿ ಸಫಾರಿಗೆ ತೆರಳಬೇಕು ಎಂಬ ಕೌತುಕ ಸೃಷ್ಟಿಸಿವೆ.
ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಗುಂಡ್ಲುಪೇಟೆ
PublicNext
12/06/2026 12:57 pm
LOADING...