ಉಡುಪಿ : ಒಂದು ಕಾಲದಲ್ಲಿ ಈ ಗುತ್ತು ಮನೆಯ ಅಧೀನದಲ್ಲಿ ಸುಮಾರು 2,500 ಎಕರೆ ಭೂಮಿ ಇತ್ತು ಎನ್ನಲಾಗುತ್ತದೆ. ಆ ಕಾಲಘಟ್ಟದಲ್ಲಿ ಈ ಮನೆ ಕೇವಲ ವಾಸಸ್ಥಳವಾಗಿರದೆ, ಊರಿನ ಆಡಳಿತ, ನ್ಯಾಯ ತೀರ್ಮಾನ ಹಾಗೂ ಧಾರ್ಮಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು.
ಗ್ರಾಮದ ಜನರಿಗೆ ಯಾವುದೇ ಸಮಸ್ಯೆ ಎದುರಾದರೆ, ಅದಕ್ಕೆ ನ್ಯಾಯಯುತ ತೀರ್ಮಾನವನ್ನು ಈ ಮನೆಯಲ್ಲೇ ಕೈಗೊಳ್ಳಲಾಗುತ್ತಿತ್ತು. ಇಂತಹ ಸಾಮಾಜಿಕ ಹೊಣೆಗಾರಿಕೆಯನ್ನು ಹೊತ್ತಿದ್ದ ನಡಿಬೆಟ್ಟು ಗುತ್ತು ಮನೆ, ಗ್ರಾಮೀಣ ಆಡಳಿತ ವ್ಯವಸ್ಥೆಯ ಪ್ರಮುಖ ಅಂಗವಾಗಿತ್ತು.
ಇಂದಿಗೂ ಹಲವು ಸಂಪ್ರದಾಯಗಳು ಮುಂದುವರಿದಿವೆ. ಊರಿನ ದೇವಸ್ಥಾನಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮೊದಲ ಪ್ರಸಾದವನ್ನು ಈ ಮನೆಯ ಕುಟುಂಬಸ್ಥರಿಗೆ ನೀಡುವ ಪದ್ಧತಿ ಈಗಲೂ ಆಚರಣೆಯಲ್ಲಿದೆ. ದೈವ-ದೇವರುಗಳ ಪೂಜೆ ಹಾಗೂ ಇತರ ಸಂಪ್ರದಾಯಗಳೂ ನಿರಂತರವಾಗಿ ನಡೆಯುತ್ತಿವೆ.
ಈ ಮನೆಗೆ ಪ್ರವೇಶಿಸಲು 9 ಮೆಟ್ಟಿಲುಗಳನ್ನು ಏರಬೇಕು. ವಿಶೇಷವಾಗಿ ಮೊದಲ ಮೆಟ್ಟಿಲನ್ನು ಪಾಪನಾಶಿನಿ ನದಿ ಸ್ಪರ್ಶಿಸುವ ದಿನವನ್ನು ಶುಭದಿನವೆಂದು ಪರಿಗಣಿಸಿ ಬಾಗಿನ ಬಿಡುವ ಆಚರಣೆ ನಡೆಯುತ್ತದೆ
ಪೂರ್ಣವಾಗಿ ವಾಸ್ತುಶಾಸ್ತ್ರದ ಆಧಾರದ ಮೇಲೆ ನಿರ್ಮಿಸಲಾದ ಈ ಮನೆ, ಆ ಕಾಲದ ನಿರ್ಮಾಣ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಆಡಳಿತ ನಡೆಸುತ್ತಿದ್ದ ಅರಸರು ಕುಳಿತುಕೊಳ್ಳುತ್ತಿದ್ದ ಐತಿಹಾಸಿಕ ಕುರ್ಚಿಯೂ ಇಂದಿಗೂ ಸಂರಕ್ಷಿತವಾಗಿದೆ.
ಈ ಮನೆಯ ವಿನ್ಯಾಸ ಎಷ್ಟು ವೈಜ್ಞಾನಿಕವಾಗಿದೆ ಎಂದರೆ, ಮಧ್ಯಾಹ್ನದ ತೀವ್ರ ಬಿಸಿಲಿನ ಸಮಯದಲ್ಲಿಯೂ ಮನೆಯ ಒಂದು ನಿರ್ದಿಷ್ಟ ಸ್ಥಳದಲ್ಲಿ ಕುಳಿತರೆ ತಂಪಾದ ಗಾಳಿ ಅನುಭವವಾಗುತ್ತದೆ
ಈ ಗುತ್ತು ಮನೆಯವರು ನಡೆಸಿಕೊಂಡು ಬಂದಿರುವ ನಡಿಬೆಟ್ಟು ಕಂಬಳ ಇಂದಿಗೂ ತನ್ನ ಪಾರಂಪರಿಕ ವೈಭವದೊಂದಿಗೆ ಸಾಗುತ್ತಿದೆ.
PublicNext
20/06/2026 06:02 pm
LOADING...