ಹಾಸನ: ಬೆಳಗೋಡು-ಹಾಸನ ಸಂಪರ್ಕಿಸುವ ಪ್ರಮುಖ ಕೆರೆ ಏರಿ ರಸ್ತೆಯಲ್ಲಿ ಉಂಟಾಗಿದ್ದ ಬೃಹತ್ ಗುಂಡಿ ಹಾಗೂ ರಸ್ತೆ ಕುಸಿತದ ಬಗ್ಗೆ ದೃಶ್ಯ ಮಾಧ್ಯಮದಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ, ಸ್ಥಳೀಯ ಶಾಸಕರು ತಕ್ಷಣ ಸ್ಪಂದಿಸಿ ರಸ್ತೆ ದುರಸ್ತಿ ಕಾಮಗಾರಿಯನ್ನು ಪೂರ್ಣಗೊಳಿಸಿದ್ದಾರೆ.
ನಿರಂತರ ಮಳೆಯಿಂದಾಗಿ ಕೆರೆ ಏರಿ ದುರ್ಬಲಗೊಂಡು ರಸ್ತೆ ಮಧ್ಯಭಾಗ ಕುಸಿಯುತ್ತಿತ್ತು. ಇದರಿಂದ ಕೆರೆ ಏರಿ ಒಡೆದು ಕೆಳಭಾಗದಲ್ಲಿರುವ ಕೃಷಿ ಜಮೀನುಗಳಿಗೆ ಹಾನಿಯಾಗುವ ಸಾಧ್ಯತೆ ಇತ್ತು. ಜೊತೆಗೆ ರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕರು, ರೈತರು ಹಾಗೂ ವಾಹನ ಸವಾರರಲ್ಲಿ ಅಪಘಾತದ ಭೀತಿ ಎದುರಾಗಿತ್ತು. ಈ ಗಂಭೀರ ಸಮಸ್ಯೆಯ ಕುರಿತು ಮಾಧ್ಯಮವು ವಿಶೇಷ ವರದಿ ಪ್ರಸಾರ ಮಾಡಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿತ್ತು.
ತ್ವರಿತ ಕಾಮಗಾರಿಗೆ ಸಾರ್ವಜನಿಕರ ಮೆಚ್ಚುಗೆ:
ಈ ವರದಿಗೆ ತಕ್ಷಣವೇ ಸ್ಪಂದಿಸಿದ ಸ್ಥಳೀಯ ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ಸೂಚನೆ ನೀಡಿ, ಕೆರೆ ಏರಿ ರಸ್ತೆಯ ದುರಸ್ತಿ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇದರಿಂದ ಆತಂಕದಲ್ಲಿದ್ದ ಸಾರ್ವಜನಿಕರು ಹಾಗೂ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಶಾಸಕರ ತ್ವರಿತ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಸಾರ್ವಜನಿಕರ ಹಿತದೃಷ್ಟಿಯಿಂದ ಸಮಸ್ಯೆಗೆ ತಕ್ಷಣ ಸ್ಪಂದಿಸಿ ದುರಸ್ತಿ ಕಾರ್ಯ ಕೈಗೊಂಡ ಶಾಸಕರು ಹಾಗೂ ಅಧಿಕಾರಿಗಳಿಗೆ ಕೃತಜ್ಞತೆಗಳು. ಜನರ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹಾರ ದೊರಕಿಸಿಕೊಡುವಲ್ಲಿ ದೃಶ್ಯ ಮಾಧ್ಯಮದ ಪಾತ್ರ ದೊಡ್ಡದಿದೆ. ಈ ದುರಸ್ತಿ ಕಾರ್ಯವು ಜವಾಬ್ದಾರಿಯುತ ಪತ್ರಿಕೋದ್ಯಮಕ್ಕೆ ಸಿಕ್ಕ ಸಾರ್ಥಕ ಪ್ರತಿಫಲ."
— ನಾಗೇಂದ್ರ ಹೊಸಕೊಪ್ಪಲು, ಹಾಸನ ಜಿಲ್ಲಾ ಉಪಾಧ್ಯಕ್ಷರು, ಮಲೆನಾಡು ರಕ್ಷಣಾ ಸೇನೆ
PublicNext
26/07/2026 01:53 pm
LOADING...