ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ತೀವ್ರ ಅಭಾವ ಕಂಡುಬಂದಿದ್ದು, ಒಟ್ಟಾರೆ ಶೇ.44ರಷ್ಟು ಮಳೆ ಕೊರತೆಯಾಗಿದೆ ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಕಷ್ಟಕ್ಕೆ ಸ್ಪಂದಿಸಲು ಅಧಿಕಾರಿಗಳ ತಂಡ ಕಾರ್ಯಪ್ರವೃತ್ತವಾಗಿದ್ದು, ಕಡೂರು, ಸಖರಾಯಪಟ್ಟಣ, ಲಕ್ಕವಳ್ಳಿ ಹಾಗೂ ಬೀರೂರು ಸೇರಿದಂತೆ ಹಲವು ಭಾಗಗಳ ಜಮೀನುಗಳಿಗೆ ನೇರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಜಂಟಿ ತಂಡವು ಬೆಳೆ ಒಣಗುತ್ತಿರುವ ಮತ್ತು ಬಿತ್ತನೆಯಾಗದೆ ಉಳಿದಿರುವ ಭೂಮಿಯ ವಾಸ್ತವ ಸ್ಥಿತಿ ತಿಳಿಯಲು ‘ಗ್ರೌಂಡ್ ಟ್ರೂಥಿಂಗ್’ ಸರ್ವೇಯನ್ನು ಚುರುಕುಗೊಳಿಸಿದೆ.
ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಬಹುದಾದ ಸೂಕ್ಷ್ಮ ಗ್ರಾಮಗಳ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಟಾಸ್ಕ್ ಫೋರ್ಸ್ ಅನುದಾನದ ಮೂಲಕ ತಕ್ಷಣದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇನ್ನು ಜಾನುವಾರುಗಳಿಗೆ ತೊಂದರೆಯಾಗದಂತೆ ಪ್ರಸ್ತುತ ಜಿಲ್ಲೆಯಲ್ಲಿ 30 ವಾರಗಳಿಗೆ ಸಾಕಾರಾಗುವಷ್ಟು ಮೇವಿನ ದಾಸ್ತಾನಿದ್ದು, ಮುನ್ನೆಚ್ಚರಿಕೆಯಾಗಿ ಅಮೃತಮಹಲ್ ತಳಿ ಸಂವರ್ಧನಾ ಕೇಂದ್ರಗಳು ಹಾಗೂ ಕಡೂರು-ಬೀರೂರು ಭಾಗದಲ್ಲಿ ಮೇವು ಬಿತ್ತನೆಗೆ ವಿಶೇಷ ಯೋಜನೆಯನ್ನೂ ರೂಪಿಸಲಾಗುತ್ತಿದೆ. ಬರಪೀಡಿತ ಪ್ರದೇಶ ಘೋಷಣೆಯ ಕುರಿತು ಮಾತನಾಡಿದ ಜಿಲ್ಲಾಧಿಕಾರಿಗಳು, ಕಡೂರು ಸೇರಿದಂತೆ ತೀವ್ರ ಮಳೆ ಕೊರತೆ ಎದುರಿಸುತ್ತಿರುವ ತಾಲೂಕುಗಳ ಸಂಪೂರ್ಣ ಮಾಹಿತಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ರಾಜ್ಯಮಟ್ಟದಲ್ಲಿ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಹಾಗೂ ಸಂಪುಟ ಉಪಸಮಿತಿಯು ನಿಯಮಾವಳಿಗಳ ಪ್ರಕಾರ ಪರಿಶೀಲನೆ ನಡೆಸಿ ಶೀಘ್ರದಲ್ಲೇ ಬರಪೀಡಿತ ಪ್ರದೇಶ ಘೋಷಣೆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
PublicNext
28/07/2026 09:45 pm
LOADING...