ಮೈಸೂರು: ಪಡಿತರ ವಿತರಣೆಯಲ್ಲಿ ವ್ಯತ್ಯಾಸವಾಗಿ ಮಾಸಾಂತ್ಯ ಕಳೆದರೂ ಗ್ರಾಮದಲ್ಲಿ ಪಡಿತರ ವಿತರಣೆ ಮಾಡದಿರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿರುವ ಘಟನೆ ಎಚ್.ಡಿ. ಕೋಟೆಯಲ್ಲಿ ನಡೆದಿದೆ.
ಎಚ್.ಡಿ. ಕೋಟೆ ತಾಲೂಕಿನ ಅಡಹಳ್ಳಿ ಗ್ರಾಮದಲ್ಲಿ ಪ್ರಾಮಾಣಿಕವಾಗಿ ವಿತರಣೆ ಮಾಡುತ್ತಿದ್ದ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ರಾಜಕೀಯ ದುರುದ್ದೇಶ ಹಾಗೂ ಅಧಿಕಾರಿಗಳ ಪಿತೂರಿಯಿಂದ ಪಡಿತರ ವಿತರಣೆಯನ್ನು ರದ್ದು ಮಾಡಿ, ದೂರದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲು ಅನುಮತಿ ನೀಡಿರುವ ಆಹಾರ ಇಲಾಖೆ ವಿರುದ್ಧ ಗ್ರಾಮಸ್ಥರು ಹಾಗೂ ರೈತರು ಸಿಡಿದೆದ್ದು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಗ್ರಾಮಸ್ಥರು ಹಾಗೂ ರೈತ ಮುಖಂಡರು ಮಾತನಾಡಿ, "ನಮ್ಮ ಗ್ರಾಮದ ಪಡಿತರ ಲೈಸೆನ್ಸ್ದಾರರು ಪ್ರಾಮಾಣಿಕವಾಗಿ ಪಡಿತರ ತಂದು ಗ್ರಾಮದಲ್ಲಿ ವಿತರಣೆ ಮಾಡುತ್ತಿದ್ದರು. ಆದರೂ ಯಾವುದೇ ದೂರುಗಳಿಲ್ಲದಿದ್ದರೂ ರಾಜಕೀಯ ಚಿತಾವಣೆ ಹಾಗೂ ಅಧಿಕಾರಿಗಳ ಪಿತೂರಿಯಿಂದ ಈ ರೀತಿ ರದ್ದು ಮಾಡಿ, ದೂರದ ಊರಿನ ಬೇರೆ ಲೈಸೆನ್ಸ್ದಾರರಿಂದ ಹಣ ಪಡೆದು ಅವರಿಗೆ ಅನುಮತಿ ನೀಡಿರುವುದು ಖಂಡನೀಯ. ವಯಸ್ಸಾದವರು, ಮಹಿಳೆಯರು ದೂರದ ಊರುಗಳಿಗೆ ತೆರಳಿ ಪಡಿತರ ಪಡೆಯುವುದಕ್ಕಾಗುವುದಿಲ್ಲ. ನಮ್ಮ ಗ್ರಾಮಕ್ಕೇ ತಂದು ವಿತರಣೆ ಮಾಡುವ ವ್ಯವಸ್ಥೆ ಕಲ್ಪಿಸಬೇಕು" ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ, ಎಚ್.ಡಿ. ಕೋಟೆ ತಾಲೂಕು ಕಚೇರಿಯಲ್ಲಿ ಯಾವುದೇ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ, ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ. ಇನ್ನು ಆಹಾರ ಇಲಾಖೆ ಅಧಿಕಾರಿಗಳು ಸಹ ಸರಿಯಾಗಿ ಕೆಲಸ ನಿರ್ವಹಿಸದೆ ಹಣ ಕೊಟ್ಟವರಿಗೆ ಪಡಿತರ ವಿತರಣೆ ಮಾಡಲು ಅವಕಾಶ ಮಾಡಿಕೊಡುವ ದಂದೆ ಮಾಡಿಕೊಂಡಿದ್ದಾರೆ.
ಸಂಬಂಧಪಟ್ಟ ಸಚಿವರು, ಜಿಲ್ಲಾಧಿಕಾರಿಗಳು ಇದರ ಬಗ್ಗೆ ನಿಗಾ ವಹಿಸಿ ಅವರ ಮೇಲೆ ಸರಿಯಾದ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಾಲೂಕು ಆಡಳಿತದ ವಿರುದ್ಧ ಕಿಡಿಕಾರಿದರು.ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಫುಡ್ ಶಿರಸ್ತೆದಾರ ಅವರನ್ನು ತರಾಟೆಗೆ ತೆಗೆದುಕೊಂಡ ರೈತ ಮುಖಂಡರು, "ಕೂಡಲೇ ನಮ್ಮ ಗ್ರಾಮಕ್ಕೆ ಪಡಿತರ ನೀಡಬೇಕು. ಇಲ್ಲವಾದಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕರು ಬರುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ" ಎಂದು ಬಿಗಿಪಟ್ಟು ಹಿಡಿದು ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹೊ.ಕೆ. ಮಹೇಂದ್ರ, ಕುಮಾರಸ್ವಾಮಿ, ಕೆಂಪಶೆಟ್ಟಿ, ನಂದಕುಮಾರ್, ಶಂಕರಲಿಂಗಪ್ಪ, ಚಂದ್ರೇಗೌಡ, ಬಾಲಕೃಷ್ಣ, ದೇವೇಶ್ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
PublicNext
29/07/2026 03:28 pm