ಚಾಮರಾಜನಗರ : ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿರುವ ಕಾವೇರಿ ನೀರು ನಿಯಂತ್ರಣ ಸಮಿತಿಯ ಕ್ರಮವನ್ನು ವುರೋಧಿಸಿ ಹಾಗೂ ಚಿತ್ರಮಂದಿರದಲ್ಲಿ ತಮಿಳು ಚಲನಚಿತ್ರ ಪ್ರದರ್ಶನ ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಖಾಲಿ ತಟ್ಟೆ, ಲೋಟ ಬಡಿದು ವಿನೂತನ ಪ್ರತಿಭಟನೆ ನಡೆಸಿದರು.
ನಗರದ ಶ್ರೀಬಸವೇಶ್ವರ ಚಿತ್ರಮಂದಿರದ ಎದುರು ಖಾಲಿ ತಟ್ಟೆ,ಲೋಟ ಹಿಡಿದು ಜಮಾಯಿಸಿದ ಪ್ರತಿಭಟನಾಕಾರರು
ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ತಮಿಳುನಾಡು ಸಿಎಂ ವಿಜಯ್ ಅವರ ಚಲನಚಿತ್ರವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಸಿನಿಮಾವನ್ನು ಸ್ಥಗಿತಗೊಳಿಸಿದರು.
ತಮಿಳುನಾಡಿಗೆ 15 ದಿನಗಳ ಕಾಲ ದಿನಕ್ಕೆ 3500 ಕ್ಯೂಸೆಕ್ಸ್ ನೀರು ಬಿಟ್ಟರೆ ರಾಜ್ಯಕ್ಕೆ ತುಂಬಾ ನಷ್ಟವಾಗುತ್ತದೆ. ರಾಜ್ಯದಲ್ಲಿ ಮಳೆ ಇಲ್ಲ, ಕೆರೆ-ಕಟ್ಟೆ ಖಾಲಿ, ಅಂತರ್ಜಲ ಕುಸಿತ, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಹರಿದಿದರೆ ನಮ್ಮ ಗತಿ ಏನು ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ಬರದ ಸ್ಥಿತಿಯನ್ನು ಸಿಡಬ್ಲ್ಯೂಆರ್ಸಿ ಸಮಿತಿಗೆ ತಿಳಿಸುವಲ್ಲಿ ವಿಫಲವಾಗಿದೆ. ಈ ಹಿಂದೆ ಸಿಎಂ ಆಗಿದ್ದ ಬಂಗಾರಪ್ಪ ಅವರು ದಿಟ್ಟ ನಿರ್ಧಾರ ಕೈಗೊಂಡಂತೆ ಈಗಿನ ಸಿಎಂ ಡಿ.ಕೆ.ಶಿವಕುಮಾರ್ ಅವರು ತೆಗೆದುಕೊಂಡು ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರನ್ನು ಬಿಡಬಾರದು ಎಂದು ಆಗ್ರಹಿಸಿದರು.
ಒಂದು ವೇಳೆ ತಮಿಳುನಾಡಿಗೆ ನೀರ ಬಿಟ್ಟರೆ ಕಬಿನಿ ಡ್ಯಾಂ ಚಳವಳಿ ನಡೆಸಲಾಗುವುದು. ಅಲ್ಲದೇ ಸೆ. 3 ರಂದು ರಾಜ್ಯಕ್ಕೆ ಆಗಮಿಸುವ ತಮಿಳುನಾಡು ಸಿಎಂ ವಿಜಯ್ ಅವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು. ಆದ್ದರಿಂದ ಕೂಡಲೇ ಸರ್ವಪಕ್ಷ ಸಭೆ, ವಿಶೇಷ ವಿಧಾನಸಭಾ ಅಧಿವೇಶನವನ್ನು ಕರೆಯಬೇಕು. ರಾಜ್ಯದ ಬರ ಪರಿಸ್ಥಿತಿಯನ್ನು ಸಂಸದರು ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಬೇಕು. ನಾಲೆಗಳ ಮೂಲಕ ಕೆರೆ-ಕಟ್ಟೆ, ಕುಡಿಯುವ ನೀರು ಮತ್ತು ಅಂತರ್ಜಲ ವೃದ್ಧಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
Kshetra Samachara
31/07/2026 04:11 pm
LOADING...