ಶೃಂಗೇರಿ: ಕಾಫಿನಾಡಿನ ಮಲೆನಾಡ ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಕೆರೆಕಟ್ಟೆ ಹಾಗೂ ಶೃಂಗೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಶ್ಲೇಷ ನಕ್ಷತ್ರದ ಮಳೆ ಧಾರಾಕಾರವಾಗಿ ಅಬ್ಬರಿಸುತ್ತಿದೆ. ಪರಿಣಾಮವಾಗಿ ತುಂಗಾ ನದಿ ಮೈದುಂಬಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಜನರಲ್ಲಿ ಮತ್ತೆ ಭೀತಿ ಆವರಿಸಿದೆ. ಒಂದೇ ವಾರದಲ್ಲಿ ಸತತ ಎರಡನೇ ಬಾರಿಗೆ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, ಶೃಂಗೇರಿಯ ಶಾರದಾ ಪೀಠದ ವಾಹನ ನಿಲುಗಡೆ ಸ್ಥಳ ಗಾಂಧಿ ಮೈದಾನ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದೆ!
ಪವಿತ್ರ ಶ್ರೀ ಶೃಂಗೇರಿ ಶಾರದಾ ಪೀಠಕ್ಕೆ ಸಂಪರ್ಕ ಕಲ್ಪಿಸುವ ಪ್ಯಾರಲಲ್ ರಸ್ತೆ ಜಲಾವೃತಗೊಂಡಿದ್ದು, ಸಂಚಾರ ವ್ಯತ್ಯಯಗೊಂಡಿದೆ. ನದಿಯ ಒಳಹರಿವು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿರುವುದರಿಂದ ನದಿ ತೀರದಲ್ಲಿರುವ ಅಂಗಡಿ ಹಾಗೂ ಕುರುಬರಗೇರಿ ರಸ್ತೆಗಳಿಗೂ ನೀರು ನುಗ್ಗಿದ್ದು, ಇಡೀ ಪಟ್ಟಣವೇ ಜಲದಿಗ್ಬಂಧನಕ್ಕೊಳಗಾದ ವಾತಾವರಣ ಸೃಷ್ಟಿಯಾಗಿದೆ.
ಆರ್ಭಟಿಸುತ್ತಿರುವ ನದಿ ಮತ್ತು ಹಠಾತ್ ಜಲಾವೃತಗೊಂಡ ರಸ್ತೆಗಳಿಂದಾಗಿ ಪಾದಚಾರಿಗಳು ವಾಹನ ಸವಾರರು ಪರದಾಡುವಂತಾಗಿದೆ. ನದಿ ಪಾತ್ರದಲ್ಲಿ ಪ್ರವಾಹದ ಅಪಾಯ ತೀವ್ರವಾಗಿರುವುದರಿಂದ ಕ್ಷೇತ್ರಕ್ಕೆ ಆಗಮಿಸುವ ಪ್ರವಾಸಿಗರು ಹಾಗೂ ಭಕ್ತಾದಿಗಳು ನದಿ ತೀರಕ್ಕೆ ತೆರಳದಂತೆ ಎಚ್ಚರಿಕೆ ವಹಿಸಬೇಕಿದೆ.
PublicNext
05/08/2026 10:01 pm
LOADING...