ಶಿವಮೊಗ್ಗ: ಭದ್ರಾವತಿ ತಾಲೂಕಿನ ಯರೇಹಳ್ಳಿ ಬಸಾಪುರ ಗ್ರಾಮದಲ್ಲಿ ಮನೆಯೊಂದರ ಬಾಗಿಲಿನ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ಕಳವು ಮಾಡಲಾಗಿದೆ.
ಆಶಾ ಕಾರ್ಯಕರ್ತೆ ಪವಿತ್ರಾ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಪವಿತ್ರಾ ಅವರು ಭದ್ರಾವತಿಯಲ್ಲಿರುವ ತಮ್ಮ ತಾಯಿ ಮನೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದ್ದು, ಮರುದಿನ ಮನೆಗೆ ವಾಪಸ್ ಬಂದಾಗ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿದೆ.
ಮನೆಯ ಹಾಲ್ನಲ್ಲಿದ್ದ ಅಲ್ಮಾರಿಯನ್ನು ಒಡೆದು ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿತ್ತು. ಲಾಕರ್ನಲ್ಲಿಟ್ಟಿದ್ದ ಸುಮಾರು 27.5 ಗ್ರಾಂ ಚಿನ್ನದ ಆಭರಣಗಳು (ಅಂದಾಜು ₹1.70 ಲಕ್ಷ), 109 ಗ್ರಾಂ ಬೆಳ್ಳಿ ವಸ್ತುಗಳು (ಸುಮಾರು ₹19,500) ಹಾಗೂ ₹2 ಲಕ್ಷ ನಗದು ಸೇರಿ ಒಟ್ಟು ₹3,89,500 ಮೌಲ್ಯದ ವಸ್ತುಗಳು ಕಳವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
PublicNext
06/08/2026 09:38 am
LOADING...