ಹಾನಗಲ್: ತಾಲೂಕಿನ ಕೆಲವರಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಡಿಕೆ ಬೆಳೆಗಾರರಿಗೆ 2025–26ನೇ ಸಾಲಿನ ಬೆಳೆ ವಿಮೆ ಮಂಜೂರಾತಿಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಖಂಡಿಸಿ, ತಾಲೂಕಿನ ಅಡಿಕೆ ಬೆಲೆಗಾರರು ಹಾಗೂ ರೈತರು ಪಟ್ಟಣದಲ್ಲಿ ಬೈಕ್ ರ್ಯಾಲಿ ಮೂಲಕ ಪ್ರತಿಭಟನೆ ನಡೆಸಿದರು..
ಪಟ್ಟಣದ ಕುಮಾರೇಶ್ವರ ವಿರಕ್ತ ಮಠದಿಂದ ತಹಶೀಲ್ದಾರ್ ಕಚೇರಿವರೆಗೆ ಬೈಕ್ ರ್ಯಾಲಿ ನಡೆಸಿದ ರೈತರು, ಕೆಲವರಕೊಪ್ಪ, ಮಾಳಾಪುರ, ಕರೇಕ್ಯಾತನಹಳ್ಳಿ, ಬ್ಯಾತನಾಳ ಹಾಗೂ ಕರೇಕ್ಯಾತನಹಳ್ಳಿ ತಾಂಡಾ ಸೇರಿದಂತೆ ವಿವಿಧ ಗ್ರಾಮಗಳ ರೈತರು ವಿಮಾ ಕಂತು ಪಾವತಿಸಿದ್ದರೂ ಪಂಚಾಯತಿವಾರು ವಿಭಿನ್ನ ರೀತಿಯಲ್ಲಿ ಬೆಳೆ ವಿಮೆ ಮಂಜೂರು ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಆಣೆವಾರು ಎಂದರೇನು, ಅದನ್ನು ಯಾರು ಹಾಗೂ ಯಾವ ಆಧಾರದ ಮೇಲೆ ಮಾಡುತ್ತಾರೆ? ತಾಲೂಕು, ಹೋಬಳಿ ಅಥವಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಆಣೆವಾರು ನಿರ್ಧರಿಸಲಾಗುತ್ತದೆಯೇ ಎಂಬುದರ ಕುರಿತು ಸ್ಪಷ್ಟ ಮಾಹಿತಿ ನೀಡುವಂತೆ ರೈತರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು.
ಅಲ್ಲದೇ ಕಳೆದ ಐದು ವರ್ಷಗಳ ಅಡಿಕೆ ಬೆಳೆ ವಿಮೆ ಮಂಜೂರಾತಿ ವಿವರ ಹಾಗೂ ಹಾನಗಲ್ ತಾಲೂಕು ಸೇರಿದಂತೆ ಹಾವೇರಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಂಜೂರಾಗಿರುವ ಬೆಳೆ ವಿಮೆ ಮೊತ್ತದ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ರೈತರು ಆಗ್ರಹಿಸಿದರು.
ಬಳಿಕ ತಹಶೀಲ್ದಾರ್ ವಿಠ್ಠಲ್ ಚೌಗಲಾ ರಿಗೆ
ಮನವಿ ಸಲ್ಲಿಸಿ, ಬೆಳೆ ವಿಮೆ ಮಂಜೂರಾತಿಯಲ್ಲಿನ ತಾರತಮ್ಯ ನಿವಾರಿಸಿ ಅರ್ಹ ರೈತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
ಬೆಳೆ ವಿಮೆ ಮಂಜೂರಾತಿಯಲ್ಲಿನ ತಾರತಮ್ಯ ನಿವಾರಿಸಿ ರೈತರಿಗೆ ನ್ಯಾಯ ಒದಗಿಸದಿದ್ದರೆ ಸೆ.25ರಂದು ಹಾನಗಲ್–ಸಿರಸಿ, ಹಾವೇರಿ–ಸಿರಸಿ ಹಾಗೂ ಹಾನಗಲ್–ಮಕರವಳ್ಳಿ ಮಾರ್ಗಗಳ ನಾಲ್ಕರ ಕ್ರಾಸ್ನಲ್ಲಿ ರಸ್ತೆ ಬಂದ್ ಮಾಡಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.
ವರದಿ: ಲೋಕೇಶ್ ಸುಣಗಾರ್, ಪಬ್ಲಿಕ್ ನೆಕ್ಸ್ಟ್, ಹಾನಗಲ್
PublicNext
15/09/2026 08:56 pm