ಸಿದ್ದಾಪುರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಶಿರಸಿಯ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ 1955 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1989 ಕುರಿತು ಜಿಲ್ಲಾ ಮಟ್ಟದ ವಿಚಾರಗೋಷ್ಠಿ ಕಾರ್ಯಗಾರ ನಡೆದಿದೆ, ಜಿಲ್ಲಾ ಮಟ್ಟದ ಕಾರ್ಯಗಾರ ಮಾಡಿ ಕೇವಲ ಶಿರಸಿಯವರನ್ನು ಕರೆದು ಉಳಿದ ಹನ್ನೊಂದು ತಾಲೂಕುಗಳಲ್ಲಿನ ದಲಿತ ಮುಖಂಡರು ಹಾಗೂ ಸಂಘಟನೆಗಳಿಗೆ ಮಾಹಿತಿ ನೀಡದೆ, ಆಹ್ವಾನಿಸದೆ ಸಂವಾದ ಕಾರ್ಯಕ್ರಮವನ್ನು ಕಾಟಚಾರಕ್ಕೆ ಮಾಡಿದ್ದಾರೆ ಸಮಾಜ ಕಲ್ಯಾಣ ಇಲಾಖೆ ಮೂಲಕ ದಲಿತರ ಹಿತ ಕಾಯಬೇಕಾಗಿದ್ದ ಸರ್ಕಾರ ದಲಿತರ ಹಕ್ಕನ್ನು ದಮನ ಮಾಡುತ್ತಿದೆ, ಇದು ಕಾಂಗ್ರೆಸ್ಸಿನ ದಲಿತ ವಿರೋಧಿ ನೀತಿಯ ಮತ್ತೊಂದು ಉದಾಹರಣೆಯಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ನಂದನ ಬೋರ್ಕರ್ ಆರೋಪ ಮಾಡಿದ್ದಾರೆ.
ಇಂತಹ ಕಾರ್ಯಕ್ರಮಗಳಲ್ಲಿ ದಲಿತ ಸಮುದಾಯದ ಪ್ರತಿನಿಧಿಗಳನ್ನು ಆಹ್ವಾನಿಸಿ ಮತ್ತು ಅವರ ಅಭಿಪ್ರಾಯಗಳನ್ನು ಕೇಳುವುದು ಅತ್ಯಂತ ಅಗತ್ಯವಾಗಿದೆ.ಸಮುದಾಯದ ಸಮಸ್ಯೆಗಳು, ಅನುಭವಗಳು ಹಾಗೂ ಅಭಿಪ್ರಾಯಗಳು ಚರ್ಚೆಗೆ ಬರಲು ಅವರ ಭಾಗವಹಿಸುವಿಕೆ ಬಹಳ ಮುಖ್ಯವಾಗಿದೆ.
ದಲಿತ ಸಮುದಾಯದ ಸಂಘಟನೆಗಳು ಮತ್ತು ಮುಖಂಡರುಗಳನ್ನ ಹೊರಗಿಟ್ಟು ಮಾಡಿದ ಈ ಕಾರ್ಯಕ್ರಮ ನಿಮಗೆ ದಲಿತರ ಶ್ರೇಯೋಭಿವೃದ್ಧಿ ಮುಖ್ಯವಲ್ಲ ಕಾಟಾಚಾರಕ್ಕೆ ಕಾರ್ಯಾಗಾರ ಮಾಡಿ ಫೋಟೋಶೂಟ್ ಮಾಡಿ ವರದಿ ನೀಡುವುದೇ ಮುಖ್ಯ ಎಂಬಂತಿದೆ.
ಉಳಿದ ತಾಲೂಕಿನ ದಲಿತ ಸಮುದಾಯದವರನ್ನ ಹೊರಗಿಟ್ಟು ನಡೆಸಿದ ಕಾರ್ಯಾಗಾರದಿಂದ ಯಾವುದೇ ಪ್ರಯೋಜನ ಸಮಾಜಕ್ಕೆ ಆಗಲಿಲ್ಲ ಹೀಗೆ ಮಾಡಿರುವುದರಿಂದ ಕಾಯ್ದೆ ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೇ ಬರಲಿದೆ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ದಲಿತ ವಿರೋಧಿ ನೀತಿಯನ್ನು ಖಂಡಿಸುತ್ತ ಜಿಲ್ಲೆಯ ಎಲ್ಲ ತಾಲೂಕಿನ ದಲಿತ ಸಮುದಾಯಗಳಿಗೆ ದಲಿತ ಮುಖಂಡರುಗಳಿಗೆ ಸಾರ್ವಜನಿಕರಿಗೆ ಆಹ್ವಾನ ನೀಡಿ ಕಾರ್ಯಾಗಾರವನ್ನು ಪುನಃ ಮಾಡಬೇಕೆಂದು ಈ ಮೂಲಕ ಆಗ್ರಹಿಸಿದ್ದಾರೆ.
Kshetra Samachara
10/03/2026 05:44 pm