ಅಥಣಿ: ಬೇಸಿಗೆ ಕಾಲದಲ್ಲಿ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಂತ ಅಗತ್ಯವಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರು ಬಿಸಿಲಿನ ಪರಿಣಾಮದಿಂದ ಬೇಗನೇ ದಣಿವು, ನೀರಿನ ಕೊರತೆ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅವಶ್ಯಕವೆಂದು ಅಥಣಿ ನಗರದ ಖ್ಯಾತ ಹೃದಯ ತಜ್ಞ ಡಾಕ್ಟರ್ ಅವಿನಾಶ್ ಸಲಹೆ ನೀಡಿದ್ದಾರೆ.
ಬೇಸಿಗೆಯ ಉಷ್ಣತೆಯ ಪ್ರಮಾಣ ಹೆಚ್ಚಾದ ಕಾರಣ ಹಿರಿಯ ನಾಗರಿಕರು ಅನಾವಶ್ಯಕವಾಗಿ ಬಿಸಿಲಿನಲ್ಲಿ ಓಡಾಡುವುದನ್ನು ತಪ್ಪಿಸಬೇಕು. ವಿಶೇಷವಾಗಿ ಮಧ್ಯಾಹ್ನ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಹೊರಗಡೆ ಹೋಗದೇ ತಂಪಾದ ಜಾಗದಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮ. ದೇಹಕ್ಕೆ ಆರಾಮವಾಗುವಂತೆ ತೆಳುವಾದ ಹತ್ತಿ ಬಟ್ಟೆಗಳನ್ನು ಧರಿಸುವುದು ಹಾಗೂ ತಲೆಗೆ ಟೋಪಿ ಅಥವಾ ತುಪ್ಪಟ್ಟೆ ಬಳಸುವುದು ಕೂಡ ಅಗತ್ಯ ಎಂದು ಅವರು ತಿಳಿಸಿದ್ದಾರೆ.
ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ದಿನವಿಡೀ ಸಾಕಷ್ಟು ನೀರು ಕುಡಿಯುವುದು ಮುಖ್ಯ. ಮಜ್ಜಿಗೆ, ತೆಂಗಿನಕಾಯಿ ನೀರು, ನಿಂಬುಸರಬತ್ತು, ಹಣ್ಣುಗಳ ರಸ ಇತ್ಯಾದಿಗಳನ್ನು ಸೇವಿಸುವುದರಿಂದ ದೇಹದಲ್ಲಿ ನೀರಿನ ಕೊರತೆ ತಪ್ಪಿಸಬಹುದು. ಜೊತೆಗೆ ಕಲ್ಲಂಗಡಿ, ಕರಬೂಜ, ಸೌತೆಕಾಯಿ ಮುಂತಾದ ತಂಪು ನೀಡುವ ಹಣ್ಣು-ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಆರೋಗ್ಯಕ್ಕೆ ಸಹಾಯಕವಾಗುತ್ತದೆ.
ಅತಿಯಾದ ಕೊಬ್ಬು (ಫ್ಯಾಟ್) ಇರುವ ಆಹಾರಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ವಿಶೇಷವಾಗಿ ಜಂಕ್ ಫುಡ್, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಹೆಚ್ಚು ಉಪ್ಪು ಮತ್ತು ಮಸಾಲೆ ಇರುವ ಆಹಾರಗಳನ್ನು ತಪ್ಪಿಸುವುದು ಉತ್ತಮ. ಇಂತಹ ಆಹಾರ ಪದ್ಧತಿಯಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ ಎಂದು ಡಾಕ್ಟರ್ ಅವಿನಾಶ್ ಎಚ್ಚರಿಸಿದ್ದಾರೆ.
ಹಿರಿಯ ನಾಗರಿಕರು ನಿಯಮಿತವಾಗಿ ಔಷಧಿ ಸೇವನೆ ಮಾಡುವವರು ತಮ್ಮ ವೈದ್ಯರ ಸಲಹೆ ಪ್ರಕಾರವೇ ಔಷಧಿಗಳನ್ನು ಮುಂದುವರಿಸಬೇಕು. ಜೊತೆಗೆ ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಲಘು ವ್ಯಾಯಾಮ, ನಡೆದುಬರುವುದು ಅಥವಾ ಯೋಗಾಭ್ಯಾಸ ಮಾಡುವುದು ಆರೋಗ್ಯ ಕಾಪಾಡಲು ಸಹಾಯಕವಾಗುತ್ತದೆ. ಹೆಚ್ಚು ಸುಸ್ತಾಗುವುದು, ಉಸಿರಾಟ ತೊಂದರೆ, ಎದೆನೋವು, ತಲೆಸುತ್ತು ಇತ್ಯಾದಿ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ಅವರು ತಿಳಿಸಿದ್ದಾರೆ.
ಒಟ್ಟಾರೆ ಬೇಸಿಗೆಯಲ್ಲಿ ಸರಿಯಾದ ಆಹಾರ ಪದ್ಧತಿ, ಸಾಕಷ್ಟು ನೀರಿನ ಸೇವನೆ, ಬಿಸಿಲಿನಿಂದ ದೂರವಿರುವುದು ಹಾಗೂ ವೈದ್ಯರ ಸಲಹೆ ಪಾಲಿಸುವುದರಿಂದ ಹಿರಿಯ ನಾಗರಿಕರು ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.
PublicNext
11/03/2026 08:28 am