ಮುಲ್ಕಿ: ಹಳೆಯಂಗಡಿ ಸಮೀಪದ ಸಸಿಹಿತ್ಲು ಭಗವತೀ ದೇವಸ್ಥಾನದ ಸಮೀಪದ ಕಡಲತೀರದಲ್ಲಿ ಸುಮಾರು 45 ಕೆಜಿ ತೂಕದ ಬೃಹತ್ ಕಡಲಾಮೆಯೊಂದು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಸ್ಥಳೀಯರ ಮಾಹಿತಿಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯರ ಸಹಕಾರದೊಂದಿಗೆ ಅದನ್ನು ರಕ್ಷಿಸಲಾಗಿದೆ.
ಸಮುದ್ರದ ಅಲೆಗಳ ಅಬ್ಬರಕ್ಕೆ ದಡಕ್ಕೆ ಬಂದಿದ್ದ ಈ ಕಡಲಾಮೆಯ 'ಪ್ಲಿಪ್ಪರ್' (ಈಜು ರೆಕ್ಕೆ) ತುಂಡಾಗಿದ್ದು, ತೀವ್ರವಾಗಿ ಗಾಯಗೊಂಡಿತ್ತು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಕರಾವಳಿ ಮತ್ತು ಮೆರೈನ್ ವಿಭಾಗದ ಅಧಿಕಾರಿಗಳು ಆಮೆಯನ್ನು ವಶಕ್ಕೆ ಪಡೆದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಇದನ್ನು ಕುಂದಾಪುರದ ಕೋಡಿಬೆಂಗ್ರೆ ಮೆರೈನ್ ಕೇರ್ ರೆಸ್ಕೂ ಸೆಂಟರ್ಗೆ ರವಾನಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಕರಾವಳಿ ಮತ್ತು ಮೆರೈನ್ ವಿಭಾಗದ ಆರ್.ಎಫ್.ಒ (RFO) ಮನೋಜ್ ಸೋನಾ ಮಾತನಾಡಿ, “ಗಾಯಗೊಂಡ ಕಡಲಾಮೆಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದೇವೆ. ಅದರ ಪ್ಲಿಪ್ಪರ್ (ಈಜುರೆಕ್ಕೆಗೆ ಗಾಯ) ಆಗಿದ್ದು, ಇದು ನೀರಿನ ಒಳಗಡೆಯೇ ಆಗಿರುವ ಗಾಯದಂತೆ ಕಾಣುತ್ತಿದೆ. ವೈದ್ಯಕೀಯ ವರದಿ ಬಂದ ನಂತರವಷ್ಟೇ ಗಾಯಕ್ಕೆ ನಿಖರ ಕಾರಣ ತಿಳಿಯಲಿದೆ. ಚಿಕಿತ್ಸೆ ಮುಗಿದು ಆಮೆ ಚೇತರಿಸಿಕೊಂಡ ನಂತರ ಅದನ್ನು ಮರಳಿ ಸಮುದ್ರಕ್ಕೆ ಬಿಡಲಾಗುವುದು,' ಎಂದು ತಿಳಿಸಿದ್ದಾರೆ.
PublicNext
12/03/2026 06:39 pm
LOADING...