ಹುಬ್ಬಳ್ಳಿ : ಇಲ್ಲಿನ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಕೆಎಂಸಿಆರ್ಐ) ಡಿಎಸ್ಎ (ಡಿಜಿಟಲ್ ಸಬ್ಟ್ರಾಕ್ಷನ್ ಆ್ಯಂಜಿಯೋಗ್ರಫಿ) ಕ್ಯಾಥ್ಲ್ಯಾಬ್ ನಿರ್ಮಾಣ ಮಾಡಲಾಗುತ್ತಿದ್ದು, ಪಾರ್ಶ್ವವಾಯು ರೋಗಿಗಳಿಗೆ ವರದಾನವಾಗಲಿದೆ.
ಬೆಂಗಳೂರಿನ ನಿಮ್ಹಾನ್ಸ್ ಹೊರತುಪಡಿಸಿ ರಾಜ್ಯದ ಬೇರೆ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಇಲ್ಲ. ಕೆಎಂಸಿಆರ್ಐನಲ್ಲಿ ಮೊದಲ ಬಾರಿಗೆ ಡಿಎಸ್ಎ ಯಂತ್ರ ಅಳವಡಿಸಲಾಗುತ್ತಿದೆ. ಕೆಎಂಸಿಆರ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 130ರಿಂದ 150 ಪಾರ್ಶ್ವವಾಯು ರೋಗಿಗಳು ಚಿಕಿತ್ಸೆಗೆ ದಾಖಲಾಗುತ್ತಾರೆ.
ಈ ಯಂತ್ರದಿಂದ ಉತ್ತರ ಕರ್ನಾಟಕ ಭಾಗದ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಕೆಎಂಸಿಆರ್ಐನ ರೇಡಿಯಾಲಜಿ ವಿಭಾಗದಲ್ಲಿ, 13.50 ಕೋಟಿ ವೆಚ್ಚದಲ್ಲಿ ಯಂತ್ರ ಅಳವಡಿಸಲಾಗುತ್ತಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಮೂರ್ನಾಲ್ಕು ತಿಂಗಳಲ್ಲಿ ಸೇವೆ ಸಿಗಲಿದೆ. ಹೃದ್ರೋಗಿಗಳಿಗೆ ಆ್ಯಂಜಿಯೋಗ್ರಫಿ ಮೂಲಕ ಸ್ಟಂಟ್ ಅಳವಡಿಸಿ, ಹೃದಯಾಘಾತವನ್ನು ತಡೆಯಲಾಗುತ್ತದೆ.
ಡಿಎಸ್ಎ ಯಂತ್ರದಿಂದ ಮಿದುಳಿನ ಆ್ಯಂಜಿಯೋಗ್ರಫಿ ಮಾಡಬಹುದಾಗಿದೆ ಎನ್ನುತ್ತಾರೆ ಆಸ್ಪತ್ರೆಯ ವೈದ್ಯರು. ಪಾರ್ಶ್ವವಾಯು ಲಕ್ಷಣಗಳು ಕಂಡ ಬಂದ ಮೂರು ಗಂಟೆಯ ಒಳಗಾಗಿ ರೋಗಿಗಳು ಆಸ್ಪತ್ರೆಗೆ ಬಂದರೆ ಸಿ.ಟಿ ಸ್ಕ್ಯಾನ್ ಮಾಡಿ, ಟೆನೆಸ್ಟೆಪ್ಲೇಸ್ ಎಂಬ ಇಂಜೆಕ್ಷನ್ ನೀಡಿದರೆ ಪಾರ್ಶ್ವವಾಯು ತಡೆಯಬಹುದು. ಮೂರು ತಾಸಿನ ನಂತರ ಬಂದರೆ, ಡಿಎಸ್ಎ ಯಂತ್ರದ ಮೂಲಕ ತಪಾಸಣೆ ಮಾಡಲಾಗುತ್ತದೆ. ಅದರಲ್ಲಿ ಎಷ್ಟು ಪ್ರಮಾಣದಲ್ಲಿ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂಬುದನ್ನು ಪತ್ತೆ ಮಾಡಿ ನಿವಾರಣೆ ಮಾಡಬಹುದಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/03/2026 02:19 pm
LOADING...