ಸಿಎಂ ಸಿದ್ದರಾಮಯ್ಯ ಅವರು ಇಂದು ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ನ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಆ ಸಮುದಾಯದ ಜನರಿಗೆ ಶುಭ ಕೋರಿದರು. ಸಿಎಂ ಅವರ ಆಗಮನ ಹಿನ್ನೆಲೆ ಇತ್ತ ಶಿವಾಜಿನಗರ ವ್ಯಾಪ್ತಿಯಲ್ಲಿ ಬರೋ ಬೆನ್ಸನ್ ಟೌನ್ ನ ಮಿಲ್ಲರ್ಸ್ ರಸ್ತೆಯಲ್ಲಿರೋ ಖಾದ್ರಿಯಾ ಮಸೀದಿಯಲ್ಲಿ ಸಡಗರ ಮನೆ ಮಾಡಿದಂತಿತ್ತು.
ಮೌಲ್ವಿಗಳು ಸೇರಿದಂತೆ ಮತ್ತಿತರ ಮುಸ್ಲಿಂ ಮುಖಂಡರು ತಮ್ಮ ನೆಚ್ಚಿನ ಸಿಎಂ ಅವರಿಗೆ ಪುಷ್ಪಗುಚ್ಛವನ್ನು ನೀಡಿ, ಮಕ್ಮಲ್ ಟೋಪಿ ಹಾಕಿ ಆತ್ಮೀಯವಾಗಿ ಬರಮಾಡಿಕೊಂಡರೆ, ಸಿಎಂ ಸಿದ್ದರಾಮಯ್ಯ ಅವರು ಹರ್ಷಚಿತ್ತರಾಗಿ ಎಲ್ಲರತ್ತ ದೃಷ್ಟಿಹರಿಸುತ್ತ ಶುಭಾಶಯಗಳನ್ನು ತಿಳಿಸಿದರು. (ವಿಶ್ಯೂಅಲ್ಸ್)ಇದೇ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವರು ಮತ್ತು ಸಿದ್ದರಾಮಯ್ಯ ಅವರ ಒಂದು ಕಾಲದ ಗೆಳೆಯರೆನ್ನಿಸಿದ ಸಿ.ಎಂ.ಇಬ್ರಾಹಿಂ ಅವರು ಸಿಎಂ ಅವರ ಬಳಿಗೆ ಬಂದು ಬೆನ್ನು ತಟ್ಟಿ ಮಾತನಾಡಿಸಿದ್ದುದು ಗಮನ ಸೆಳೆಯುವಂತಿತ್ತು!
ಆದರೆ, ತಮ್ಮ ಅಕ್ಕ ಪಕ್ಕ ಮುಸ್ಲಿಂ ಬಾಂಧವರು ನಮಾಜು ಮಾಡುತ್ತಿದ್ದರೆ ಸಿಎಂ ಅವರು ಹಾಗೆಯೇ ಕೆಲ ಹೊತ್ತು ಎದ್ದು ನಿಂತು ಗೌರವ ಸಲ್ಲಿಸಿದರೆ ಹೊರತು ಬಗ್ಗಿ ನಮಾಜು ಮಾಡದಿರೋದು ಕಂಡು ಬಂತು. ಬಳಿಕ 'ಈದ್ ಮುಬಾರಕ್' ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಅವರು, ಯಾವ ಧರ್ಮಗಳೂ ದ್ವೇಷವನ್ನು ಬೋಧಿಸದೇ ಪ್ರೀತಿಯನ್ನೇ ಬೋಧಿಸುತ್ತವೆ. ನಾವೆಲ್ಲರೂ ಏಕತೆಯಿಂದ ಬಾಳುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದರು. ಇದೇ ವೇಳೆ ತಮ್ಮ ಪುತ್ರನನ್ನು ಸಿಎಂ ಅವರಿಗೆ ಪರಿಚಯಿಸಿದಂತಿತ್ತು.
PublicNext
21/03/2026 04:35 pm
LOADING...