ಒಮಾನ್ ಕರಾವಳಿಯ ಆಯಕಟ್ಟಿನ ಹಾರ್ಮುಜ್ ಜಲಸಂಧಿ (Strait of Hormuz) ಬಳಿ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಹಡಗು ಮತ್ತು ಬಂದರು ಸಚಿವ ಸರ್ಬಾನಂದ್ ಸೋನೋವಾಲ್ ಖಚಿತಪಡಿಸಿದ್ದಾರೆ. 'ಎಂ.ಟಿ ಸೆಟ್ಟೆಬೆಲ್ಲೊ' (MT Settebello) ಎಂಬ ತೈಲ ಸಾಗಣೆ ಹಡಗಿನ ಮೇಲೆ ಅಮೆರಿಕದ CENTCOM ಪಡೆಗಳು ಈ ನಿಖರ ದಾಳಿ ನಡೆಸಿವೆ.
24 ಮಂದಿ ಭಾರತೀಯ ನಾವಿಕರಿದ್ದರು
ದಾಳಿಗೊಳಗಾದ ತೈಲ ಟ್ಯಾಂಕರ್ನಲ್ಲಿ ಒಟ್ಟು 24 ಭಾರತೀಯ ನಾವಿಕರಿದ್ದರು.
ದಾಳಿ ನಡೆದ ತಕ್ಷಣ ಒಮಾನ್ ನೌಕಾಪಡೆಯ ಸಹಯೋಗದೊಂದಿಗೆ ಭಾರಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, 21 ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆರಂಭದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದ ಚೀಫ್ ಇಂಜಿನಿಯರ್ ಸೇರಿದಂತೆ ಮೂವರು ಭಾರತೀಯ ನಾವಿಕರ ಮೃತದೇಹಗಳು ಪತ್ತೆಯಾಗಿದ್ದು, ಅವರು ಮೃತಪಟ್ಟಿರುವುದಾಗಿ ಪ್ರಕಟಿಸಲಾಗಿದೆ.
ಅಮೆರಿಕ ನೀಡಿದ ಕಾರಣವೇನು?
ಇರಾನ್ನಿಂದ ತೈಲ ಸಾಗಿಸುವ ಹಡಗುಗಳ ಮೇಲೆ ಅಮೆರಿಕ ವಿಧಿಸಿರುವ ದಿಗ್ಬಂಧನವನ್ನು ಈ ಹಡಗು ಉಲ್ಲಂಘಿಸಿತ್ತು. ಅಮೆರಿಕ ನೌಕಾಪಡೆಗಳು ನೀಡಿದ ಸರಣಿ ಎಚ್ಚರಿಕೆ ಹಾಗೂ ಸೂಚನೆಗಳನ್ನು ಪಾಲಿಸದೆ ಇರಾನ್ನತ್ತ ಮುನ್ನುಗ್ಗುತ್ತಿದ್ದ ಕಾರಣ, ಹಡಗಿನ ಇಂಜಿನ್ ಕೋಣೆಯನ್ನು ಗುರಿಯಾಗಿಸಿ ನಿಖರ ಕ್ಷಿಪಣಿ ದಾಳಿ ನಡೆಸಲಾಯಿತು ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಸಮರ್ಥಿಸಿಕೊಂಡಿದೆ.
ಭಾರತ ತೀವ್ರ ಖಂಡನೆ: ಅಮೆರಿಕ ರಾಯಭಾರಿಗೆ ಸಮನ್ಸ್
ಈ ಘಟನೆಯನ್ನು ಭಾರತದ ವಿದೇಶಾಂಗ ಸಚಿವಾಲಯ (MEA) ತೀವ್ರವಾಗಿ ಖಂಡಿಸಿದೆ. ವಾಣಿಜ್ಯ ಹಡಗುಗಳ ಮೇಲಿನ ಇಂತಹ ದಾಳಿಗಳು ಮತ್ತು ಅಮಾಯಕ ನಾವಿಕರ ಸಾವು ಅತ್ಯಂತ ಕಳವಳಕಾರಿ ಎಂದು ಹೇಳಿದೆ. ಭಾರತದಲ್ಲಿರುವ ಅಮೆರಿಕದ ಪ್ರಭಾರ ರಾಯಭಾರಿ ಜೇಸನ್ ಮೀಕ್ಸ್ ಅವರಿಗೆ ವಿದೇಶಾಂಗ ಇಲಾಖೆಯು ತುರ್ತು ಸಮನ್ಸ್ ಜಾರಿಗೊಳಿಸಿ, ತನ್ನ ತೀವ್ರ ಪ್ರತಿರೋಧವನ್ನು (Demarche) ದಾಖಲಿಸಿದೆ.
ಮೃತರ ಪಾರ್ಥಿವ ಶರೀರಗಳನ್ನು ಭಾರತಕ್ಕೆ ತರಲು ಮತ್ತು ಬದುಕುಳಿದ ನಾವಿಕರನ್ನು ತಾಯ್ನಾಡಿಗೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವ ಸರ್ಬಾನಂದ್ ಸೋನೋವಾಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
PublicNext
11/06/2026 10:48 pm