ಮೂಡಿಗೆರೆ: ರೈತರೊಬ್ಬರ ಗೋಡೌನ್ನ ಬೀಗ ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ ಯಂತ್ರೋಪಕರಣಗಳನ್ನು ಕಳವು ಮಾಡಿರುವ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ನಿವಾಸಿಯಾದ ನಾಗರಾಜ್ ಎಂಬುವವರು ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು, ತೋಟಗಳಲ್ಲಿ ಕಳೆ ಹೊಡೆಯುವ ಕೆಲಸಕ್ಕಾಗಿ ಸುಮಾರು 15 ಮಿಷನ್ ಹಾಗೂ ಮರ ಕತ್ತರಿಸುವ ಯಂತ್ರಗಳನ್ನು ಹೊಂದಿದ್ದರು.
ಎಂದಿನಂತೆ ಗುರುವಾರ ರಾತ್ರಿ ತಮ್ಮ ಮನೆಯ ಮುಂಭಾಗದಲ್ಲಿದ್ದ ಕೃಷಿ ಯಂತ್ರೋಪಕರಣಗಳ ಗೋಡೌನ್ಗೆ ಬೀಗ ಹಾಕಿ ಮಲಗಿದ್ದರು. ಆದರೆ ಮಧ್ಯರಾತ್ರಿಯ ಅವಧಿಯಲ್ಲಿ ನುಗ್ಗಿದ ಖದೀಮರು ಗೋಡೌನ್ನ ಬೀಗವನ್ನು ಒಡೆದು, ಒಳಗೆ ಇಟ್ಟಿದ್ದ STIHL ಕಂಪನಿಯ 2 ಕಳೆಹೊಡೆಯುವ ಮಿಷನ್, OXI POWER ಕಂಪನಿಯ 8 ಕಳೆಹೊಡೆಯುವ ಮಿಷನ್ ಹಾಗೂ 35 ಸಾವಿರ ಮೌಲ್ಯದ 1 ಮರಕತ್ತರಿಸುವ ಮಿಷನ್ ಸೇರಿದಂತೆ ಒಟ್ಟು 95,000 ರೂಪಾಯಿ ಮೌಲ್ಯದ 11 ಯಂತ್ರಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಶುಕ್ರವಾರ ಬೆಳಿಗ್ಗೆ ನಾಗರಾಜ್ ಅವರು ಗೋಡೌನ್ ಬಳಿ ಹೋದಾಗ ಬೀಗ ಮುರಿದಿರುವುದು ಕಂಡುಬಂದು ಕಳ್ಳತನದ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗಾಗಿ ಜಾಲ ಬೀಸಿದ್ದಾರೆ.
Kshetra Samachara
13/06/2026 09:22 pm
LOADING...