ಚಿಕ್ಕಮಗಳೂರು: ತರಾತುರಿಯಲ್ಲಿ ಮನೆಗೆ ಬೀಗ ಹಾಕದೆ ಹೊರಟ ದಂಪತಿಯ ನಿರ್ಲಕ್ಷ್ಯವನ್ನು ಬಂಡವಾಳ ಮಾಡಿಕೊಂಡ ಕಳ್ಳರು, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವ ಘಟನೆ ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂತವೇರಿಯಲ್ಲಿ ನಡೆದಿದೆ.
ಸಂತವೇರಿ ನಿವಾಸಿ ಚಂದ್ರಪ್ಪ ಹಾಗೂ ಅವರ ಹೆಂಡತಿ ಇತ್ತೀಚೆಗಷ್ಟೇ ಚಿಕ್ಕಮಗಳೂರಿನ ಆಭರಣ ಜ್ಯುವೆಲರ್ಸ್ನಲ್ಲಿ 6,35,344 ರೂಪಾಯಿ ಮೌಲ್ಯದ 27.090 ಗ್ರಾಂ ತೂಕದ ಒಂದು ಚಿನ್ನದ ನೆಕ್ಲೆಸ್ ಹಾಗೂ 10.24 ಗ್ರಾಂ ತೂಕದ ಚಿನ್ನದ ಕಿವಿ ಓಲೆಯನ್ನು ಖರೀದಿಸಿದ್ದರು. ಆ ಒಡವೆಗಳನ್ನು ಮನೆಯ ನಡುಬಟ್ಟೆಯ ಟೀಪಾಯಿ ಮೇಲಿದ್ದ ಬಟ್ಟೆಯೊಂದರ ಅಡಿಯಲ್ಲಿ ಬಚ್ಚಿಟ್ಟಿದ್ದರು. ಮಗನನ್ನು ಶಾಲೆಗೆ ಸೇರಿಸಲು ದಂಪತಿ ಬೈಕ್ನಲ್ಲಿ ದೇವರಹಳ್ಳಿಗೆ ಹೊರಟಾಗ, ಅವರ ಹೆಂಡತಿ ಅವಸರದಲ್ಲಿ ಮನೆಗೆ ಬೀಗ ಹಾಕಲು ಮರೆತಿದ್ದಾರೆ.
ಹೊಸಗಂಗೂರು ಘಾಟಿಯಲ್ಲಿ ಹೋಗುವಾಗ ಈ ವಿಷಯ ನೆನಪಿಗೆ ಬಂದು, ಎದುರು ಮನೆಯ ಕಾಂಚನ ಎಂಬುವರಿಗೆ ಫೋನ್ ಮಾಡಿ ಬೀಗ ಹಾಕಲು ತಿಳಿಸಿದ್ದಾರೆ. ಕಾಂಚನ ಅವರು ಮನೆಗೆ ಹೋಗಿ ನೋಡಿದಾಗ ಒಳಗಿನ ಬಟ್ಟೆ ಮತ್ತು ಬ್ಯಾಗ್ಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ. ಅನುಮಾನಗೊಂಡು ಒಡವೆ ಇಟ್ಟಿದ್ದ ಜಾಗವನ್ನು ಪರಿಶೀಲಿಸಿದಾಗ ಚಿನ್ನದ ನೆಕ್ಲೆಸ್ ಹಾಗೂ ಕಿವಿ ಓಲೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಚಂದ್ರಪ್ಪ ಅವರು ಲಿಂಗದಹಳ್ಳಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.
Kshetra Samachara
15/06/2026 10:00 am
LOADING...