ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಹೆತ್ತಮ್ಮನ ಮೇಲಿನ ದೌರ್ಜನ್ಯಕ್ಕೆ ತಂದೆಯ ಹತ್ಯೆ - ಅಪಘಾತದ ನಾಟಕವಾಡಿ ಸಿಕ್ಕಿಬಿದ್ದ ಪಾಪಿ ಪುತ್ರ!

ಚಿಕ್ಕಮಗಳೂರು: ಕುಡಿತದ ವ್ಯಸನ ಮತ್ತು ನಿರಂತರ ಕೌಟುಂಬಿಕ ದೌರ್ಜನ್ಯವು ಒಂದು ಸುಂದರ ಸಂಸಾರವನ್ನು ಕ್ಷಣಮಾತ್ರದಲ್ಲಿ ನರಕವಾಗಿಸಿದ ಘಟನೆಯೊಂದು ಚಿಕ್ಕಮಗಳೂರು ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರತಿದಿನ ಮದ್ಯಪಾನ ಮಾಡಿ ಪತ್ನಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಿದ್ದ ತಂದೆಯ ಕಿರುಕುಳಕ್ಕೆ ಬೇಸತ್ತು, ಸ್ವಂತ ಮಗನೇ ತಂದೆಯನ್ನು ಮಣೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ಹನುಮನಹಳ್ಳಿ ಗ್ರಾಮದ ನಿವಾಸಿಯಾದ 55 ವರ್ಷದ ಕೆಂಚೇಗೌಡ ಎಂಬುವವರು ತೀವ್ರವಾಗಿ ಕುಡಿತಕ್ಕೆ ದಾಸರಾಗಿದ್ದರು. ಇತ್ತೀಚೆಗೆ ಅವರ ವರ್ತನೆ ಮಿತಿಮೀರಿ ಪತ್ನಿಯ ಮೇಲೆ ತೀವ್ರ ಸ್ವರೂಪದ ಹಲ್ಲೆ ನಡೆಸಿದ್ದರು. ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಂತಹ ಗಂಭೀರ ಪರಿಸ್ಥಿತಿ ಎದುರಾಗಿತ್ತು. ಮನೆಯಲ್ಲಿ ಪ್ರತಿನಿತ್ಯ ತಂದೆ ನಡೆಸುತ್ತಿದ್ದ ದೌರ್ಜನ್ಯ ಹಾಗೂ ಅಮ್ಮ ಅನುಭವಿಸುತ್ತಿದ್ದ ನರಕಯಾತನೆಯನ್ನು ಕಂಡು ಎರಡನೇ ಮಗ ಕುಮಾರ್ ತೀವ್ರವಾಗಿ ನೊಂದಿದ್ದನು. ತಂದೆಯ ಕಿರುಕುಳಕ್ಕೆ ಶಾಶ್ವತ ಮುಕ್ತಿ ಹಾಡಲು ನಿರ್ಧರಿಸಿದ ಕುಮಾರ್, ಜೂನ್ 10ರ ಸಂಜೆ ಮನೆಯಲ್ಲಿದ್ದ ಮಣೆಯಿಂದ ತಂದೆಯ ತಲೆ ಹಾಗೂ ಹೊಟ್ಟೆಯ ಭಾಗಕ್ಕೆ ಬಲವಾಗಿ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಕೆಂಚೇಗೌಡರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಕೊಲೆ ಮಾಡಿದ ನಂತರ ಕಾನೂನಿನಿಂದ ತಪ್ಪಿಸಿಕೊಳ್ಳಲು ಚಾಲಾಕಿ ಪುತ್ರ ಕುಮಾರ್ ಆಕಸ್ಮಿಕ ಅಪಘಾತದ ನಾಟಕವಾಡಿದ್ದನು. ಆರಂಭದಲ್ಲಿ ಕುಟುಂಬಸ್ಥರು ಸಹ ಗೊಂದಲಕ್ಕೀಡಾಗಿ ಜೂನ್ 11ರಂದು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಇದೊಂದು ಆಕಸ್ಮಿಕ ಅಪಘಾತ ಎಂದು ದೂರು ನೀಡಿದ್ದರು. ದೂರು ದಾಖಲಾದ ಬೆನ್ನಲ್ಲೇ ತನಿಖೆ ಆರಂಭಿಸಿದ ಪೊಲೀಸರು ಶವಾಗಾರಕ್ಕೆ ತೆರಳಿ ಮೃತದೇಹವನ್ನು ಪರಿಶೀಲಿಸಿದಾಗ ದೊಡ್ಡ ತಿರುವು ಸಿಕ್ಕಿತು. ಮೃತರ ತಲೆ ಹಾಗೂ ಹೊಟ್ಟೆಯ ಕೆಳಭಾಗದಲ್ಲಿ ತೀವ್ರವಾದ ಗಾಯಗಳಿರುವುದನ್ನು ಕಂಡು, ಇದು ಅಪಘಾತವಲ್ಲ ಬದಲಿಗೆ ಹಲ್ಲೆ ಇರಬಹುದೆಂದು ಪೊಲೀಸರು ಶಂಕಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಗ್ರಾಮಾಂತರ ಪೊಲೀಸರು ಮೃತರ ಕುಟುಂಬಸ್ಥರು ಮತ್ತು ಸ್ಥಳೀಯರನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು.

ಸಂದೇಹದ ಆಧಾರದ ಮೇಲೆ ಮಗ ಕುಮಾರ್‌ನನ್ನು ಪೊಲೀಸರು ತಮ್ಮದೇ ಶೈಲಿಯಲ್ಲಿ ತೀವ್ರ ವಿಚಾರಣೆ ನಡೆಸಿದಾಗ ಆತನ ಮುಖವಾಡ ಕಳಚಿ ಬಿದ್ದಿದೆ. ತಾನೇ ತಂದೆಯನ್ನು ಕೊಂದಿರುವುದಾಗಿ ಒಪ್ಪಿಕೊಂಡ ಆತನ ಕಳ್ಳಾಟ ಬಯಲಾಗಿದೆ. ಸದ್ಯ ಪೊಲೀಸರು ಈ ಪ್ರಕರಣವನ್ನು ಕೊಲೆ ಕೇಸ್ ಆಗಿ ಮಾರ್ಪಡಿಸಿದ್ದು, ಆರೋಪಿ ಕುಮಾರ್‌ನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ಒಟ್ಟಾರೆ ಕುಡಿತದ ಮಹಾಪಿಡುಗಿನಿಂದಾಗಿ ಮನೆಯ ಯಜಮಾನ ಸ್ಮಶಾನ ಸೇರಿದ್ದರೆ, ಹೆತ್ತ ತಾಯಿಯ ರಕ್ಷಣೆಗೆ ನಿಲ್ಲಬೇಕಾಗಿದ್ದ ಮಗ ಕಂಬಿ ಎಣಿಸುವಂತಾಗಿದೆ. ತಂದೆಯ ದೌರ್ಜನ್ಯದಿಂದಾಗಿ ಆಸ್ಪತ್ರೆ ಸೇರಿದ್ದ ದುರ್ದೈವಿ ಹೆತ್ತಮ್ಮ, ಈಗ ಗಂಡನೂ ಇಲ್ಲದೆ, ಮಗನೂ ಇಲ್ಲದೆ ಒಂಟಿಯಾಗಿ ಕಣ್ಣೀರು ಹಾಕುತ್ತಾ ಅನಾಥಳಾಗಿ ನಿಂತಿದ್ದು ಇಡೀ ಕುಟುಂಬವನ್ನೇ ಈ ಮದ್ಯದ ವ್ಯಸನ ಬಲಿಪಡೆದುಕೊಂಡಿರುವುದು ದುರಂತವೇ ಸರಿ.

ಡ್ಯಾನಿ, ಪಬ್ಲಿಕ್ ನೆಕ್ಸ್ಟ್, ಚಿಕ್ಕಮಗಳೂರು

Edited By : Shivu K
PublicNext

PublicNext

15/06/2026 06:44 pm

Cinque Terre

1.18 K

Cinque Terre

0

ಸಂಬಂಧಿತ ಸುದ್ದಿ