ಬೆಂಗಳೂರು: ಎರಡನೇ ಸುತ್ತಿನ ಸಂಪುಟ ವಿಸ್ತರಣೆಯ ವಿಚಾರವನ್ನು ಬದಿಗಿಟ್ಟು ನೂತನ ಸಿಎಂ ಡಿಕೆಶಿ ಅವರೀಗ ಸರ್ಕಾರದ ಮಧ್ಯಂತರ ಬಜೆಟ್ ಮಂಡಿಸಲು ಸಿದ್ಧರಾದರೆ? ಎಂಬ ಪ್ರಶ್ನೆ ಮೂಡಿದ್ದು, ಕಾಂಗ್ರೆಸ್ ಮೂಲಗಳ ಪ್ರಕಾರ ಉತ್ತರ 'ಹೌದು' ಎನ್ನುವಂತಿದೆ. ಈ ಮಾತಿಗೆ ಪುಷ್ಟಿ ಎಂಬಂತೆ ಸಿಎಂ ಡಿ.ಕೆ.ಶಿವಕುಮಾರ್ ಅವರು ಕಳೆದ 2-3 ದಿನಗಳಿಂದಲೂ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳಿಂದ ಮಧ್ಯಂತರ ಬಜೆಟ್ ಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆಂದು ಹೇಳಲಾಗುತ್ತೆ.
ಮಧ್ಯಂತರ ಬಜೆಟ್ ಏಕೆ?
ಫೆಬ್ರವರಿ ತಿಂಗಳಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ 2026-27 ನೇ ಸಾಲಿನ ಆಯವ್ಯಯವನ್ನು ಮಂಡಿಸಿದ್ದಾರೆ. ಆದರೂ ಈಗ ಮತ್ತೊಮ್ಮೆ ಬಜೆಟ್ ಮಂಡಿಸಲು ಡಿಕೆಶಿ ಅವರು ಮುಂದಾಗಿರೋದಾದರೂ ಏಕೆ? ಅನ್ನೋ ಪ್ರಶ್ನೆ ಸಹಜ. ಕಾಂಗ್ರೆಸ್ ನ ಆಪ್ತ ಮೂಲಗಳ ಪ್ರಕಾರ, ಹೈಕಮಾಂಡ್ ನೊಂದಿಗೆ ನಡೆದ ಆಂತರಿಕ ಒಪ್ಪಂದದ ಪ್ರಕಾರ ಸಿದ್ದರಾಮಯ್ಯ ಅವರು ಡಿಕೆಶಿಗೆ ಫೆಬ್ರವರಿ ತಿಂಗಳೊಳಗೆ ಅಧಿಕಾರವನ್ನು ಬಿಟ್ಟುಕೊಡಬೇಕಾಗಿತ್ತು. ಆದರೆ, ಅಧಿಕಾರ ಹಸ್ತಾಂತರದ ಹಗ್ಗ ಜಗ್ಗಾಟವು ಮೇ ತಿಂಗಳವರೆಗೆ ಮುಂದುವರಿದ ಪರಿಣಾಮ ಸಿದ್ದರಾಮಯ್ಯನವರೇ ತಮ್ಮ 17ನೇ ರಾಜ್ಯ ಬಜೆಟ್ ಅನ್ನು ಮಂಡಿಸಿದರು.
ಈ ವೇಳೆಗಾಗಲೇ ಸಿಎಂ ಆಗಿ ತಾವೇ ಬಜೆಟ್ ಮಂಡಿಸಬೇಕೆಂದು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರೆನ್ನಲಾದ ಡಿ.ಕೆ.ಶಿವಕುಮಾರ್ ಅವರಿಗೆ ತೀವ್ರ ನಿರಾಶೆ ಮೂಡಿಸಿತ್ತಂತೆ. ಈಗಲಾದರೂ ಏನಾಯ್ತು? ತಮ್ಮ ಕನಸಿನ ಯೋಜನೆಗಳನ್ನು ಸಾಕಾರಗೊಳಿಸಲು ಮತ್ತು ಆ ಮೂಲಕ ರಾಜ್ಯದಲ್ಲಿ 2028 ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕೆಂದು ಡಿಕೆಶಿ ಮಹಾ ಯೋಜನೆಯನ್ನೇ ಹಾಕಿಕೊಂಡಿದ್ದಾರಂತೆ. ಅದರ ಮೊದಲ ಭಾಗವೆಂಬಂತೆ ಇದೀಗ ಮಧ್ಯಂತರ ಬಜೆಟ್ ಗೆ ಕೈಹಾಕಿದ್ದಾರೆಂದು ಹೇಳಲಾಗುತ್ತೆ.
2026-27ನೇ ಸಾಲಿನ ಮಧ್ಯಂತರ ಬಜೆಟ್ ನೊಂದಿಗೆ ರಾಜ್ಯದ ಜನತೆಗೆ ಭರಪೂರ ಕೊಡುಗೆ ನೀಡುವ ಮೂಲಕ ತಾವು ಜನಸಾಮಾನ್ಯರಿಗೆ ಇನ್ನಷ್ಟು ಜನಪ್ರಿಯರಾಗಬೇಕೆಂದುಕೊಂಡಂತಿದೆ ಡಿಕೆಶಿ! ಏಕೆಂದರೆ, 2027-28 ರಲ್ಲಿ ಅಲ್ಪಾವಧಿ ಬಜೆಟ್ ಮಂಡಿಸಬೇಕಾಗುತ್ತೆ! ಅದಕ್ಕೆಂದೇ ಇದೀಗ ಮಧ್ಯಂತರ ಮತ್ತು ಪೂರ್ಣಾವಧಿ ಬಜೆಟ್ ಅನ್ನು ಮಂಡಿಸಲು ಡಿಕೆಶಿ ಅವರು ಗಂಭೀರವಾಗಿ ಯೋಚಿಸಿದ್ದಾರಂತೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಹಿರಿಯ ಅಧಿಕಾರಿಗಳೊಂದಿಗೆ ಬಿಡುವಿಲ್ಲದಂತೆ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ ಎನ್ನುತ್ತವೆ ಕಾಂಗ್ರೆಸ್ ನ ಮೂಲಗಳು!
PublicNext
15/06/2026 07:10 pm