ಮೂಡಿಗೆರೆ: ಕಾಫಿನಾಡಿನಲ್ಲಿ ಮಳೆಗಾಲ ಆರಂಭವಾಗುತ್ತಿದಂತೆ ರಸ್ತೆ ಅವಸ್ಥೆ ದೇವರಿಗೆ ಪ್ರೀತಿ ಎಂಬಂತೆ ಆಗುತ್ತದೆ. ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಳೂರು ಗ್ರಾಮದ ರಸ್ತೆಯೂ ಅವ್ಯವಸ್ಥೆಯಿಂದ ಕೂಡಿದ್ದು ಮಳೆಗಾಲ ಶುರುವಾಗುತ್ತಿದ್ದಂತೆ ಇಡೀ ರಸ್ತೆ ಕಂಬಳದ ಕೆಸರುಗದ್ದೆಯಂತೆ ಮಾರ್ಪಡುತ್ತಿದೆ. ಇದರಿಂದ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಪ್ರತಿನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಕರಾವಳಿಯ ಜಾನಪದ ಕ್ರೀಡೆ ಕಂಬಳವನ್ನು ನೆನಪಿಸುವಂತೆ ಬದಲಾಗಿರುವ ಈ ರಸ್ತೆಯ ದುಸ್ಥಿತಿಯನ್ನು ಕಂಡರೆ ಯಾರಾದರೂ ಬೆಚ್ಚಿಬೀಳುವುದು ಖಂಡಿತ.
ಹಳಿಕೆ ಗ್ರಾಮದಿಂದ ಕೋಳೂರಿನ ಶಾಲೆಗೆ ಆಗಮಿಸುವ ಪುಟ್ಟ ಮಕ್ಕಳು ಕೆಸರಿನ ಹಳ್ಳದಲ್ಲೇ ಹೆಜ್ಜೆ ಹಾಕುತ್ತಾ ಶಾಲೆ ತಲುಪಬೇಕಾದ ಕಠಿಣ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲದೇ, ಊರಿನ ಪ್ರತಿಯೊಬ್ಬ ಪ್ರಜೆಯೂ ಇದೇ ನರಕಸದೃಶ ರಸ್ತೆಯಲ್ಲಿ ದಿನನಿತ್ಯ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ.
ರಸ್ತೆಯಲ್ಲಿ ನಿಂತಿರುವ ನೀರನ್ನು ಪಕ್ಕದ ತೋಟಕ್ಕೆ ಹರಿಸಲು ಮುಂದಾದರೆ, ತೋಟದ ಮಾಲೀಕರು ತಕರಾರು ತೆಗೆಯುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಈ ಎಲ್ಲಾ ಅವಾಂತರಗಳ ನಡುವೆಯೂ ಸ್ಥಳೀಯ ಬೆಟ್ಟಗೆರೆ ಗ್ರಾಮ ಪಂಚಾಯತ್ ಅಧಿಕಾರಿಗಳು ಮಾತ್ರ ಜವಾಬ್ದಾರಿಯಿಂದ ನುಣುಚಿಕೊಂಡು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
PublicNext
21/07/2026 12:27 pm
LOADING...