ಹೊಸಪೇಟೆ : ನೀಟ್ (NEET-UG) ಪರೀಕ್ಷಾ ಅಕ್ರಮ, ಭ್ರಷ್ಟಾಚಾರ ವಿರೋಧಿಸಿ ದೆಹಲಿಯಲ್ಲಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ನಡೆಸಿದ ಅಮಾನುಷ ಲಾಠಿ ಚಾರ್ಜ್, ಟಿಯರ್ ಗ್ಯಾಸ್ (ಅಶ್ರುವಾಯು), ಪೆಲ್ಲೆಟ್ ಗನ್ಸ್ ಪ್ರಯೋಗ ಹಾಗೂ ಶಾಕ್ ಬಟನ್ ಬಳಸಿ ಎಸಗಿದ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿ AIDSO ಸಂಘಟನೆ ಪ್ರತಿಭಟನೆ ನಡೆಸಿತು.
ಪ್ರತಿಭಟನೆ ವೇಳೆ ಮಾತಾಡಿದ AIDSO ಜಿಲ್ಲಾಧ್ಯಕ್ಷರಾದ ರವಿಕಿರಣ್, ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯ ಹಾಗೂ ಎನ್ಟಿಎ (NTA) ವೈಫಲ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
"ವೈದ್ಯರಾಗಿ ದೇಶಸೇವೆ ಮಾಡುವ ಕನಸು ಹೊತ್ತು, ವರ್ಷಪೂರ್ತಿ ಹಗಲು-ರಾತ್ರಿ ಕಷ್ಟಪಟ್ಟು ಓದುವ ಬಡ ಹಾಗೂ ಮಧ್ಯಮ ವರ್ಗದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ 'ಕೋಚಿಂಗ್ ಮಾಫಿಯಾ' ಮತ್ತು ಭ್ರಷ್ಟ NTA ಚೆಲ್ಲಾಟವಾಡುತ್ತಿದೆ. ಪೋಷಕರು ತಮ್ಮ ಆಸ್ತಿ-ಪಾಸ್ತಿ ಮಾರಿ ವರ್ಷಕ್ಕೆ ₹80,000 ದಿಂದ ₹3 ಲಕ್ಷದವರೆಗೆ ಕೋಚಿಂಗ್ ಸೆಂಟರ್ಗಳಿಗೆ ಸುರಿಯುತ್ತಿದ್ದಾರೆ. ಆದರೆ, ಇಡೀ ಪರೀಕ್ಷಾ ವ್ಯವಸ್ಥೆಯು ಅತಿ ಹೆಚ್ಚು ಹಣ ನೀಡುವವರಿಗೆ ಹರಾಜಾಗುತ್ತಿರುವುದು ಅಕ್ಷಮ್ಯ ಅಪರಾಧ ಎಂದರು.
ವಿದ್ಯಾರ್ಥಿಯೊಬ್ಬರು ಮಾತಾಡಿ, ತಮ್ಮ ಹಕ್ಕಿಗಾಗಿ ಹಾಗೂ ಭವಿಷ್ಯಕ್ಕಾಗಿ ದೆಹಲಿಯ ಬೀದಿಗಿಳಿದು ನ್ಯಾಯ ಕೇಳಿದ ವಿದ್ಯಾರ್ಥಿಗಳ ಮೇಲೆ ಕರುಣೆಯಿಲ್ಲದೆ ಲಾಠಿ ಚಾರ್ಜ್ ಮಾಡಲಾಗಿದೆ. ಅಶ್ರುವಾಯು ಚೆಲ್ಲಿ, ಪೆಲ್ಲೆಟ್ ಗನ್ಸ್ , ಶಾಕ್ ಬಟನ್ಗಳನ್ನು ಬಳಸಿ ಹಲ್ಲೆ ನಡೆಸಲಾಗಿದೆ. ವಿದ್ಯಾರ್ಥಿಗಳ ದೇಹದ ಮೇಲಿನ ಗಾಯಗಳು ಹಾಗೂ ಅವರ ದೇಹದಿಂದ ಹರಿದ ನೆತ್ತರು ಇಡೀ ದೇಶದ ಶಿಕ್ಷಣ ವ್ಯವಸ್ಥೆಯ ಕುಸಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಂದು ಈ ಆಕ್ರೋಶದ ಧ್ವನಿ ಕೇವಲ ದೆಹಲಿಯ ಜಂತರ್ ಮಂತರ್ ಗೆ ಸೀಮಿತವಾಗಿಲ್ಲ, ಇಡೀ ದೇಶಾದ್ಯಂತ ಹಾಗೂ ವಿದೇಶಗಳಲ್ಲಿನ ಪ್ರಜ್ಞಾವಂತ ಜನಸಮುದಾಯ ಈ ಹೋರಾಟಕ್ಕೆ ಬೆಂಬಲವಾಗಿ ಬೀದಿಗಿಳಿಯುತ್ತಿದ್ದಾರೆ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ರು.
PublicNext
23/07/2026 07:40 am
LOADING...