ಚಿಕ್ಕಮಗಳೂರು: ಸಾಲವನ್ನು ಸಂಪೂರ್ಣವಾಗಿ ತೀರಿಸಿದ್ದರೂ ಹೆಚ್ಚುವರಿ ಬಡ್ಡಿ ಹಣ ನೀಡುವಂತೆ ಒತ್ತಾಯಿಸಿ, ಸಾರ್ವಜನಿಕವಾಗಿ ಯುವತಿಯ ಮೇಲೆ ಹಲ್ಲೆ ನಡೆಸಿ ವಸ್ತ್ರ ಹರಿದು ಕೊಲೆ ಬೆದರಿಕೆ ಹಾಕಿದ ಆರೋಪ ಚಿಕ್ಕಮಗಳೂರು ನಗರದ ಬಸವನಹಳ್ಳಿಯಲ್ಲಿ ಕೇಳಿಬಂದಿದೆ.
ಬಸವನಹಳ್ಳಿಯ ಸೈಬರ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಮಾನಸ ಎಂಬ ಯುವತಿ ದಾಳಿಗೆ ಒಳಗಾದವರು. ಈ ಸಂಬಂಧ ಯುಕ್ತಾದೇವಿ, ಅವರ ಪತಿ ನಂದಿ ಸಜ್ಜದ್ ಹುಸೇನ್ ಹಾಗೂ ಮಗ ಟೆನಿಶ್ ವಿರುದ್ಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನಸ ಅವರು ಯುಕ್ತಾದೇವಿ ಅವರಿಂದ ₹50,000 ಸಾಲ ಪಡೆದಿದ್ದು, ಅದನ್ನು ಸಂಪೂರ್ಣವಾಗಿ ಮರುಪಾವತಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ ಹೆಚ್ಚುವರಿಯಾಗಿ ₹20,000 ಬಡ್ಡಿ ಹಣ ನೀಡುವಂತೆ ಆರೋಪಿಗಳು ಒತ್ತಾಯಿಸುತ್ತಿದ್ದರು ಎಂದು ಹೇಳಲಾಗಿದೆ.
ಆಗಸ್ಟ್ 3ರಂದು ಸಂಜೆ ಮಾನಸ ಕೆಲಸ ಮಾಡುತ್ತಿದ್ದ ಅಂಗಡಿಗೆ ಮೂವರು ಬಂದು ಗಲಾಟೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಲಾಗಿದೆ. ಮಾನಸ ಅಂಗಡಿಯಿಂದ ಹೊರಬರುತ್ತಿದ್ದ ವೇಳೆ ಟೆನಿಶ್ ಅವರು ತಲೆಗೂದಲು ಹಿಡಿದು ಎಳೆದಾಡಿ, ಉಟ್ಟಿದ್ದ ಚೂಡಿದಾರವನ್ನು ಹರಿದಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ಥಳಕ್ಕೆ ಬಂದ ಯುವತಿಯ ತಂಗಿ ಹಾಗೂ ಅಂಗಡಿ ಮಾಲೀಕರು ಜಗಳ ಬಿಡಿಸಲು ಯತ್ನಿಸಿದಾಗ, ಕೊಲೆ ಬೆದರಿಕೆ ಹಾಕಿ ಮೂವರೂ ಸ್ಥಳದಿಂದ ತೆರಳಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಾಯಗೊಂಡ ಮಾನಸ ಅವರು ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ದೂರಿನ ಆಧಾರದ ಮೇಲೆ ಬಸವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
PublicNext
04/08/2026 10:41 pm
LOADING...