ಕಡೂರು : ₹500 ಮುಖಬೆಲೆಯ ನೋಟುಗಳನ್ನು ಕೊಟ್ಟರೆ ಅದಕ್ಕಿಂತ ಹೆಚ್ಚಿನ ಮೊತ್ತದ ₹100 ಮುಖಬೆಲೆಯ ನೋಟುಗಳನ್ನು ನೀಡುವುದಾಗಿ ನಂಬಿಸಿ ಸಿವಿಲ್ ಕಂಟ್ರಾಕ್ಟರ್ ಒಬ್ಬರಿಂದ ಭರ್ಜರಿ ₹12 ಲಕ್ಷ ಹಣ ದೋಚಿ ಪರಾರಿಯಾಗಿರುವ ಖದೀಮರ ಜಾಲ ಕಡೂರು ತಾಲೂಕಿನ ಬೀರೂರಿನಲ್ಲಿ ಬೆಳಕಿಗೆ ಬಂದಿದೆ.
ವಿಜಯಪುರ ಮೂಲದ ಸಂತೋಷ್ ಎಂಬ ಉದ್ಯಮಿಗೆ ಹಳೆ ನೋಟು ಬದಲಾವಣೆಯ ಆಮಿಷವೊಡ್ಡಿದ್ದ ಕಿಲಾಡಿಗಳು, ₹12 ಲಕ್ಷ ನೀಡಿದರೆ ಬರೋಬ್ಬರಿ ₹20 ಲಕ್ಷ ಮೌಲ್ಯದ ₹100 ಮುಖಬೆಲೆಯ ನೋಟುಗಳನ್ನು ಕೊಡುವುದಾಗಿ ನಂಬಿಸಿದ್ದರು. ಇದನ್ನು ಸತ್ಯವೆಂದು ನಂಬಿದ ಉದ್ಯಮಿ, ತಮ್ಮ ಸ್ನೇಹಿತನೊಂದಿಗೆ ₹12 ಲಕ್ಷ ನಗದಿನೊಂದಿಗೆ ಬೀರೂರು-ತರೀಕೆರೆ ರಸ್ತೆಯ ಹೋರಿತಿಮ್ಮನಹಳ್ಳಿ ಸೇತುವೆ ಬಳಿ ಬಂದಿದ್ದರು.
ಖದೀಮರು ಬೊಲೆರೋ ಜೀಪ್ನಲ್ಲಿ ಬಂದು, ಉದ್ಯಮಿಯಿಂದ ₹12 ಲಕ್ಷ ನಗದು ಹಣವನ್ನು ಎಣಿಸಿಕೊಂಡು ಪಡೆದಿದ್ದಾರೆ. ಬಳಿಕ "₹20 ಲಕ್ಷ ನೀಡುತ್ತೇವೆ, ಇಲ್ಲೇ ಕಾಯಿರಿ" ಎಂದು ನಂಬಿಸಿ ಹಣದೊಂದಿಗೆ ಜೀಪ್ನಲ್ಲಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ. ಮೋಸ ಹೋಗಿರುವುದು ಅರಿವಿಗೆ ಬರುತ್ತಿದ್ದಂತೆ ಸಂತ್ರಸ್ತರು ಪೊಲೀಸರ ಮೊರೆ ಹೋಗಿದ್ದು, ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃತ್ಯ ಎಸಗಿದ ಖದೀಮರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
PublicNext
05/08/2026 10:53 pm
LOADING...