ಶಿವಮೊಗ್ಗ : ಸೊರಬ ತಾಲೂಕಿನ ಕಾನಹಳ್ಳಿಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕಳೆದ 19 ವರ್ಷಗಳಿಂದ ಡಾಂಬಾರೀಕರಣ ಕಂಡಿಲ್ಲ. ಗುಂಡಿಬಿದ್ದ ರಸ್ತೆಯಲ್ಲಿ ಮಳೆನೀರು ನಿಂತು ಸಂಪೂರ್ಣ ಕೆಸರು ಗದ್ದೆಯಂತಾಗಿದ್ದು, ತಾಳ್ಮೆ ಕಳೆದುಕೊಂಡ ಗ್ರಾಮಸ್ಥರು ರಸ್ತೆ ಗುಂಡಿಗಳಲ್ಲೇ ಭತ್ತದ ಸಸಿ ನೆಡುವ ಮೂಲಕ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಹೌದು, ಸೊರಬ ತಾಲೂಕಿನ ಕಾನಹಳ್ಳಿಯಲ್ಲಿ ಸುಮಾರು 4 ಕಿ.ಮೀ. ಉದ್ದದ ಈ ರಸ್ತೆ ಸಂಪೂರ್ಣ ಹಾಳಾಗಿದೆ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತುಂಬಿ ಆಳ ತಿಳಿಯದೆ ವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಳ್ಳುತ್ತಿದ್ದಾರೆ. ಶಾಲಾ ಮಕ್ಕಳು, ಗರ್ಭಿಣಿಯರು ಹಾಗೂ ವೃದ್ಧರು ಉಳವಿ ಪೇಟೆಗೆ ಹೋಗಲು ಪ್ರತಿದಿನ ಹರಸಾಹಸ ಪಡುವ ದುಸ್ಥಿತಿ ನಿರ್ಮಾಣವಾಗಿದೆ.
ಇದು ಸಚಿವ ಮಧು ಬಂಗಾರಪ್ಪ ಅವರ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ಸ್ವಕ್ಷೇತ್ರದಲ್ಲೇ ಮೂಲಸೌಕರ್ಯದ ಈ ದುರವಸ್ಥೆ ಬಗ್ಗೆ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೆಗೆ ಗ್ರಾಮಸ್ಥರೇ ಗುಂಡಿಗಳನ್ನು ಮುಚ್ಚುತ್ತಾ ಬಂದಿದ್ದರೂ, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮರು ಡಾಂಬಾರೀಕರಣ ಮಾಡದೆ ಸುಮ್ಮನೆ ಕೂತಿದ್ದಾರೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ತಕ್ಷಣವೇ ರಸ್ತೆ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಕಾನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
19 ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿರುವ ಕಾನಹಳ್ಳಿ ಗ್ರಾಮಸ್ಥರ ಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಾ ಕಾದುನೋಡಬೇಕಿದೆ.
ವೀರೇಶ್ ಜಿ. ಹೊಸೂರ್, ಪಬ್ಲಿಕ್ ನೆಕ್ಸ್ಟ್, ಶಿವಮೊಗ್ಗ.
PublicNext
05/08/2026 10:53 am
LOADING...