ಅಳ್ನಾವರ: ಪಟ್ಟಣದ ಹೊರ ವಲಯದ ಎಂ.ಸಿ. ಪ್ಲಾಟ್ ಬಡಾವಣೆಯ ಜನರಿಗೆ ವಿಶ್ರಾಂತಿ, ಮಕ್ಕಳಿಗೆ ಆಟ ಹಾಗೂ ಹಿರಿಯರಿಗೆ ವಾಯುವಿಹಾರದ ತಾಣವಾಗಬೇಕಿದ್ದ
ಉದ್ಯಾನವನ ಇಂದು ನಿರ್ವಹಣೆಯ ಕೊರತೆಯಿಂದ ಹಾಳು ಬಿದ್ದಿದೆ.
ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಉದ್ಯಾನವನ ಸೂಕ್ತ ಕಾಳಜಿಯಿಲ್ಲದೆ ತನ್ನ ಮೂಲ ಸೌಂದರ್ಯ ಕಳೆದುಕೊಂಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಉದ್ಯಾನವನದಲ್ಲಿರುವ ಮಕ್ಕಳ ಆಟದ ಉಪಕರಣಗಳು ತುಕ್ಕು ಹಿಡಿದು ಹಾಳಾಗಿವೆ. ಜಾರುಬಂಡಿ ಹಾಗೂ ಇತರೆ ಆಟದ ಸಾಮಗ್ರಿಗಳು ಬಳಕೆಗೆ ಯೋಗ್ಯವಾಗಿಲ್ಲ.
ಉದ್ಯಾನವನ ಕೆಳ ಭಾಗದಲ್ಲಿ ಸಣ್ಣಪುಟ್ಟ ಕಾರ್ಯಕ್ರಮ ಮಾಡಲು ವೇದಿಕೆ ಹಾಗೂ ಜನರು ಕುಳಿತುಕೊಳ್ಳಲು ಮೆಟ್ಟಿಲು ಮಾಡಲಾಗಿದೆ. ಆ ಭಾಗದಲ್ಲಿ ಕಸ ಬೆಳೆದು
ವೇದಿಕೆ ಸಂಪೂರ್ಣ ಕಸದಿಂದ ತುಂಬಿದೆ. ಇಲ್ಲಿ ಬೆಳಕಿನ ವ್ಯವಸ್ಥೆ ಕೂಡಾ ಇಲ್ಲ. ಎಲ್ಲೆಡೆ ಕಳೆ ಬೆಳೆದು, ಗಿಡಗಂಟಿಗಳು ಆವರಿಸಿರುವುದರಿಂದ ಉದ್ಯಾನವನದ ಸೌಂದರ್ಯ ಸಂಪೂರ್ಣ ಹಾಳಾಗಿದೆ.
ಉದ್ಯಾನವನದ ಒಳಭಾಗದಲ್ಲಿ ಮಕ್ಕಳ ಆಟಿಕೆ ಇರುವ ಭಾಗದಲ್ಲಿ ಕೂಡಾ ಕಸ ಸಂಗ್ರಹವಾಗಿದ್ದು, ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ಕುಳಿತುಕೊಳ್ಳಲು ಇರುವ ಆಸನಗಳ ಸ್ಥಿತಿಯೂ ಹದಗೆಟ್ಟಿದೆ.
ಇದರಿಂದ ಕುಟುಂಬ ಸಮೇತರಾಗಿ ಬರುವ ಸಾರ್ವಜನಿಕರು ಹಾಗೂ ಹಿರಿಯ ನಾಗರಿಕರು ತೀವ್ರ ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣ ಪಂಚಾಯಿತಿ ಆಡಳಿತ ಉದ್ಯಾನವನದ ನಿರ್ವಹಣೆಗೆ ಆದ್ಯತೆ ನೀಡಿ, ಸ್ವಚ್ಛತೆ, ಹಸಿರೀಕರಣ, ಬೆಳಕಿನ ವ್ಯವಸ್ಥೆ ಹಾಗೂ ಮಕ್ಕಳ ಆಟದ ಉಪಕರಣಗಳ ದುರಸ್ತಿ ಕಾರ್ಯವನ್ನು ಶೀಘ್ರ ಕೈಗೊಳ್ಳಬೇಕು
ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಉದ್ಯಾನವನವನ್ನು ಸುಂದರವಾಗಿ ಅಭಿವೃದ್ಧಿ ಪಡಿಸಿದರೆ ಪಟ್ಟಣದ ಜನರಿಗೆ ಉತ್ತಮ ಮನರಂಜನೆ ಹಾಗೂ ಆರೋಗ್ಯಕರ ವಾತಾವರಣ ದೊರೆಯಲಿದೆ ಎಂಬುದು ನಾಗರಿಕರ ಅಭಿಪ್ರಾಯವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/08/2026 11:46 am
LOADING...