ಮುಲ್ಕಿ : ಚುಟುಕು ಸಾಹಿತ್ಯ ಪರಿಷತ್ತು ಮುಲ್ಕಿ ತಾಲೂಕು ಘಟಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಮುಲ್ಕಿ ಹೋಬಳಿ ಜಂಟಿ ಆಶ್ರಯದಲ್ಲಿ ಸಾಹಿತಿಗಳಿಗೆ ಸನ್ಮಾನ ಹಾಗೂ ಚುಟುಕು ಕವಿಗೋಷ್ಠಿ ಕಾರ್ಯಕ್ರಮವು ಮುಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮವನ್ನು ಮುಲ್ಕಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವಾಸುದೇವ ಬೆಳ್ಳೆ ಉದ್ಘಾಟಿಸಿ ಮಾತನಾಡಿ, ಚುಟುಕು ಪರಿಷತ್ತಿನ ಮಾತು ಹಾಗೂ ಕೃತಿ ಚುಟುಕಾಗಿ, ಸಮಾಜವನ್ನು ತಿದ್ದುವಂತಿರಬೇಕು. ಚುಟುಕು, ಹನಿಗವನಗಳನ್ನು ಜನರು ಅರಿತು ಬೆಳೆಸಬೇಕು ಎಂದರು. ಆಧುನಿಕ ಹನಿಗವನ ಹಾಗೂ ಚುಟುಕುಗಳಿಗೆ ವೇದಿಕೆ, ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರೋತ್ಸಾಹ ಸಿಕ್ಕಿದೆ ಎಂದರು.
ಅಧ್ಯಕ್ಷತೆಯನ್ನು ತಾಲೂಕು ಘಟಕದ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉದಯಕುಮಾರ ಹಬ್ಬು ವಹಿಸಿ ಮಾತನಾಡಿ, ಕನ್ನಡ ನಾಡು-ನುಡಿಗೆ ಅಭಿಮಾನಿಗಳ ಅಭೂತಪೂರ್ವ ಬೆಂಬಲ ದೊರೆತಿದೆ ಎಂಬ ತೃಪ್ತಿ ಇದೆ ಎಂದರು.
ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಹಾಗೂ ಪ್ರೌಢಶಾಲೆಯ ಹಿರಿಯ ಶಿಕ್ಷಕಿ ಜಯಲಕ್ಷ್ಮೀ ಜೆ. ನಾಯಕ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿಗಳು, ಕಾದಂಬರಿಕಾರರು ಹಾಗೂ ನಾಟಕಕಾರರಾದ ಶಕುಂತಲಾ ಭಟ್, ಖ್ಯಾತ ಸಾಹಿತಿ ಡಾ. ಜನಾರ್ದನ ಭಟ್ ಹಾಗೂ ಖ್ಯಾತ ಕವಿ ರವೀಂದ್ರ ನಾಯಕ ಸಣ್ಣಕ್ಕಿಬೆಟ್ಟು ಅವರನ್ನು ಸಾಧಕರ ನೆಲೆಯಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರಿಂದ ಪುಸ್ತಕ ಬಿಡುಗಡೆ ಕುರಿತು ಪರಿಚಯ ಹಾಗೂ ಚುಟುಕು ರಚನೆಯ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕವಿಗೋಷ್ಠಿ
ಬಳಿಕ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಜೋಸ್ಸಿ ಪಿಂಟೋ ವಹಿಸಿದ್ದರು. ಕವಿಗೋಷ್ಠಿಗೆ ಅನುರಾಧ ರಾಜೀವ್ ಸುರತ್ಕಲ್ ಚಾಲನೆ ನೀಡಿದರು.
ಕವಿಗಳಾದ ಪ್ರೇಮಾ ಆರ್. ಶೆಟ್ಟಿ, ಶ್ರೀದೇವಿ, ಪುಷ್ಪರಾಜ ಚೌಟ, ಶಂಕರ ಪಡಂಗ, ರಾಧಿಕಾ ಕಾಮತ್, ಉದಯ ಕುಮಾರ್ ಹಬ್ಬು ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಪ್ರೇಮಾ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರಾಧಿಕಾ ಕಾಮತ್ ಧನ್ಯವಾದ ಅರ್ಪಿಸಿದರು. ಖಜಾಂಚಿ ಶ್ರೀದೇವಿ ಕೆ.ಎಸ್. ರಾವ್ ಕಾರ್ಯಕ್ರಮ ನಿರೂಪಿಸಿದರು.
Kshetra Samachara
18/09/2026 07:33 pm