ಶಿಗ್ಗಾವಿ: ರಾಜ್ಯ ಬಜೆಟ್ನಲ್ಲಿ ಸಂತ ಶಿಶುನಾಳ ಶರೀಫರ ಅಭಿವೃದ್ಧಿ ಪ್ರಾಧಿಕಾರವನ್ನು ಘೋಷಿಸಿರುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ, ಶಿಗ್ಗಾವಿ ಪಟ್ಟಣದ ಚನ್ನಮ್ಮ ಸರ್ಕಲ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿಯಾಗಿ ಸಂಭ್ರಮಾಚರಣೆ ನಡೆಸಿದರು.
ಶಾಸಕ ಯಾಸೀರ್ ಖಾನ್ ಪಠಾಣ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಾಸೀರ್ ಖಾನ್ ಪಠಾಣ್, "ಶಿಶುನಾಳ ಶರೀಫರ ಪ್ರಾಧಿಕಾರ ರಚನೆ ಎಂಬುದು ಈ ಭಾಗದ ಜನರ ಬಹುದಿನಗಳ ಕನಸಾಗಿತ್ತು. ನಮ್ಮ ಸರ್ಕಾರ ಶಿಶುನಾಳವನ್ನು ಭಾವೈಕ್ಯತೆಯ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದೆ. ಅಲ್ಲದೆ, 36 ವಸತಿ ಶಾಲೆಗಳಿಗೆ ಶರೀಫರ ಹೆಸರಿಡುವ ಮೂಲಕ ಸರ್ಕಾರ ಅವರಿಗೆ ಅತ್ಯುನ್ನತ ಗೌರವ ನೀಡಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ಕ್ಷೇತ್ರಕ್ಕೆ ದೊರೆತ ಅನುದಾನಗಳ ಬಗ್ಗೆ ಮಾಹಿತಿ ನೀಡಿದ ಅವರು,
ಕಾರ್ಮಿಕ ವಸತಿ ಶಾಲೆ (Residency School) ಮಂಜೂರಾತಿ, ಮಹಿಳಾ ಕಾಲೇಜು ಸ್ಥಾಪನೆಗೆ ಒತ್ತು,
ಕ್ಷೇತ್ರದ ವಿವಿಧೆಡೆ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ವಿಶೇಷ ಅನುದಾನ, ಸಾಮಾನ್ಯ ಶಾಸಕನಾಗಿ ಅಲ್ಪ ಅವಧಿಯಲ್ಲಿಯೇ ದಾಖಲೆ ಮಟ್ಟದ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿದರು.
ಸಂಭ್ರಮಾಚರಣೆಯ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಶಾಸಕ ಪಠಾಣ್ ವಾಗ್ದಾಳಿ ನಡೆಸಿದರು. "ದೊಡ್ಡ ಸ್ಥಾನದಲ್ಲಿದ್ದ ಬೊಮ್ಮಾಯಿಯವರು ತಮ್ಮ ಅಧಿಕಾರಾವಧಿಯಲ್ಲಿ ಈ ಕೆಲಸಗಳನ್ನು ಏಕೆ ಮಾಡಲಿಲ್ಲ? ಅವರಿಗೆ ಕೆಲಸ ಮಾಡಲು ಯಾರಾದರೂ ಕೈ ಹಿಡಿದು ತಡೆದಿದ್ದರಾ?" ಎಂದು ಪ್ರಶ್ನಿಸಿದರು.
"ಬಸವರಾಜ ಬೊಮ್ಮಾಯಿಯವರು ಚನ್ನಮ್ಮ ಸರ್ಕಲ್ನಲ್ಲಿ ಬಹಿರಂಗ ಚರ್ಚೆಗೆ ಬರಲಿ. ನಾನು ಮಾಡಿದ ಅಭಿವೃದ್ಧಿಯ ದಾಖಲೆಗಳನ್ನು ನೀಡುತ್ತೇನೆ, ಅವರೂ ತಮ್ಮ ದಾಖಲೆಗಳನ್ನು ತರಲಿ. ಅಧಿಕಾರದಲ್ಲಿದ್ದಾಗ ಬಸ್ ಉಚಿತ ಮಾಡದವರು, 10 ಕೆಜಿ ಅಕ್ಕಿ ಕೊಡದವರು ಈಗ ಮಾತನಾಡುತ್ತಿದ್ದಾರೆ" ಎಂದು ಶಾಸಕರು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದು, ರಾಜ್ಯ ಸರ್ಕಾರದ ಜನಪರ ಯೋಜನೆಗಳಿಗೆ ಜೈಕಾರ ಹಾಕಿದರು.
PublicNext
06/03/2026 09:20 pm