ಚಾಮರಾಜನಗರ : ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ಸುರಿದ ಆಲಿಕಲ್ಲು ಸಹಿತ ಭಾರಿ ಮಳೆಗೆ ಅಪಾರ ಪ್ರಮಾಣದ ಫಸಲು ನಾಶವಾಗಿದೆ.
ಜಿಲ್ಲೆಯ ಚಾಮರಾಜನಗರ, ಯಳಂದೂರು, ಸಂತೇಮರಹಳ್ಳಿ, ಗುಂಡ್ಲುಪೇಟೆ ಭಾಗಗಳಲ್ಲಿ ಮಂಗಳವಾರ ಸಂಜೆ ಸುರಿದ ಆಲಿಕಲ್ಲು ಮಳೆಗೆ ಬಾಳೆ, ಟೊಮ್ಯಾಟೊ, ಕಲ್ಲಂಗಡಿ, ಮೆಣಸಿನಕಾಯಿ ಹಾಗೂ ಮಾವಿನ ಫಸಲು ನಾಶವಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಚಾಮರಾಜನಗರ ತಾಲೂಕಿನ ವೀರನಪುರ, ಉಡಿಗಾಲ, ಮರಿಯಾಲ, ಸಂತೇಮರಹಳ್ಳಿ, ತಮ್ಮಡಹಳ್ಳಿ, ಕಾಳನಹುಂಡಿ, ಕಾಡಹಳ್ಳಿ, ಉತ್ತವಳ್ಳಿ, ಬಸವಟ್ಟಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಸುರಿದ ಆಲಿಕಲ್ಲು ಸಹಿತ ಮಳೆಗೆ ಜಮೀನಿನಲ್ಲಿದ್ದ ಹಲವು ಫಸಲು ಮಣ್ಣು ಪಾಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಒಂದೆಡೆ ಮಳೆಯು ರೈತರ ಮೊಗದಲ್ಲಿ ಸಂತಸ ಮೂಡಿಸಿದರೆ ಮತ್ತೊಂದೆಡೆ ಸಂಕಷ್ಟ ತಂದೊಡ್ಡಿದೆ.
ಚಾಮರಾಜನಗರ ತಾಲೂಕಿನ ಕಾಳನಹುಂಡಿ ಗ್ರಾಮದಲ್ಲಿ ಮಂಜು ಎಂಬವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಹಾಗೂ ಮೆಣಸಿನಕಾಯಿ ಫಸಲು ಸಂಪೂರ್ಣವಾಗಿ ನೆಲಕಚ್ಚಿದ್ದು, ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ರೈತ ಮಂಜುನಾಥ ಸಾಲ ಮಾಡಿ ಬೆಳೆದಿದ್ದ ಫಸಲು ಆಲಿಕಲ್ಲು ಮಳೆಯ ಹೊಡೆತಕ್ಕೆ ಸಿಲುಕಿ ನೆಲಕಚ್ಚಿದೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ರೈತರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
PublicNext
18/03/2026 03:30 pm
LOADING...