ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ಯಾವುದೇ ಮೇವಿನ ಕೊರತೆ ಇಲ್ಲ. ಜಿಲ್ಲೆಯಲ್ಲಿ 12.76 ಲಕ್ಷ ಟನ್ ಮೇವು ಲಭ್ಯವಿದ್ದು, ಇದು ಮುಂದಿನ 61 ವಾರಗಳವರೆಗೆ ಜಿಲ್ಲೆಯ ಜಾನುವಾರುಗಳ ಅಗತ್ಯವನ್ನು ಪೂರೈಸಲಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
ಮಂಗಳವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಮೇವು ಅಭಿವೃದ್ದಿ ಕಾರ್ಯಪಡೆ ಸಮಿತಿ ಸಭೆ ಹಾಗೂ ಪ್ರಾಣಿ ದಯಾ ಸಂಘದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 4.84 ಲಕ್ಷ ದೊಡ್ಡ ಜಾನುವಾರುಗಳು ಮತ್ತು 86 ಸಾವಿರ ಸಣ್ಣ ಜಾನುವಾರುಗಳು ಇವೆ ಎಂದರು.
ಸಾಗರ 75 ವಾರಗಳು, ಭದ್ರಾವತಿ 65 ವಾರಗಳು, ಹೊಸನಗರ 61 ವಾರಗಳು, ತೀರ್ಥಹಳ್ಳಿ 60 ವಾರಗಳು, ಸೊರಬ 59 ವಾರಗಳು, ಶಿವಮೊಗ್ಗ 56 ವಾರಗಳು, ಶಿಕಾರಿಪುರ 48 ವಾರಗಳಿಗೆ ಸಾಕಾಗುವಷ್ಟಿದೆ. ಆದರೂ ಸಹ ಪರ್ಯಾಯ ಮೇವಿನ ಕುರಿತು ರೈತರಲ್ಲಿ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ. ನಾಗರಾಜ್ ಮಾತನಾಡಿ, ಮೇವು ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಲು 50 ಸಾವಿರ ಮೇವಿನ ಮಿನಿಕಿಟ್ಗಳನ್ನು ಸರಬರಾಜು ಮಾಡಲು ಆಯುಕ್ತಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
'ವಿಬಿಜಿ - ಜಿ ರಾಮ್ ಜಿ' ಯೋಜನೆಯಡಿ ಸಮುದಾಯ ಮೇವು ಅಭಿವೃದ್ಧಿಗಾಗಿ ಗ್ರಾಮ ಪಂಚಾಯತ್ಗಳ ಮೂಲಕ ಕನಿಷ್ಠ 5 ಎಕರೆ ಸರ್ಕಾರಿ ಭೂಮಿಯಲ್ಲಿ ಸಮುದಾಯ ಮೇವು ಬೆಳೆಯಲು ಅವಕಾಶವಿದೆ.
ಬಾಳೆಎಲೆ, ಬಾಳೆದಿಂಡು, ಹೊಂಬಾಳೆ, ಅಡಿಕೆ ಹಾಳೆ, ಕಬ್ಬಿನ ಸಿಪ್ಪೆ ಹಾಗೂ ಮೆಕ್ಕೆಜೋಳದ ರವದಿ/ಸಿಪ್ಪೆಗಳನ್ನು ಪರ್ಯಾಯ ಮೇವಾಗಿ ಬಳಸುವಂತೆ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ.
ರಸಮೇವು, ಒಣ-ಹಸಿರು ಮೇವು, ಜಲ ಮೇವು ತಯಾರಿಕೆ ಹಾಗೂ ಮೇವಿನ ಮರಗಳಾದ ಸುಬಾಬುಲ್, ಗೊಬ್ಬರ ಗಿಡ, ಹಾಲಿವಾಣ, ನುಗ್ಗೆ ಮತ್ತು ಅಗಸೆ ಎಲೆಗಳನ್ನು ಬಳಸಲು ಸಲಹೆ ನೀಡಲಾಗಿದೆ. ಮೇವಿನ ಮರಗಳ ಬೆಳೆಸುವಿಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
Kshetra Samachara
04/08/2026 02:25 pm
LOADING...