ಹಾವೇರಿ: ಗೌರಿ-ಗಣೇಶ ಚತುರ್ಥಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಮನೆ-ಮನಗಳಲ್ಲಿ ವಿಘ್ನನಿವಾರಕನ ಸ್ವಾಗತಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಹಬ್ಬ ಸಮೀಪಿಸುತ್ತಿದ್ದಂತೆ ಎಲ್ಲೆಡೆ ಪರಿಸರಸ್ನೇಹಿ ಗಣೇಶ ಮೂರ್ತಿಗಳ ಕುರಿತು ಜಾಗೃತಿ ಹಾಗೂ ಮಾತುಗಳು ಕೇಳಿಬರುವುದು ಸಹಜ. ಆದರೆ, ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕುರುಬರ ಮಲ್ಲೂರು ಗ್ರಾಮದ ಯುವ ಕಲಾವಿದರೊಬ್ಬರು ಸೆಗಣಿ ಹಾಗೂ ಪಂಚಗವ್ಯವನ್ನು ಬಳಸಿ ವಿಶಿಷ್ಟ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಗ್ರಾಮದ ಯುವ ಕಲಾವಿದ ಯಲ್ಲಪ್ಪ ಶಿವಪ್ಪ ದೊಡ್ಡಮನಿ ಎಂಬುವವರೇ ಈ ಪರಿಸರಕಾಳಜಿಯ ಕೈಂಕರ್ಯದಲ್ಲಿ ತೊಡಗಿರುವ ಸಾಧಕ. ಕಳೆದ ಐದು ವರ್ಷಗಳ ಹಿಂದೆ ಮಹಾರಾಷ್ಟ್ರದ ಕನ್ನೇರಿ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ್ದಾಗ, ಅಲ್ಲಿನ ವಟುಗಳು ಗೋಮಯದಿಂದ ಗಣೇಶ ಮೂರ್ತಿ ತಯಾರಿಸುವುದನ್ನು ಕಂಡು ಪ್ರೇರಿತರಾದ ಯಲ್ಲಪ್ಪ, ತಾವು ಕೂಡ ಪರಿಸರಪ್ರೇಮಿ ಗಣೇಶ ಮೂರ್ತಿ ತಯಾರಿಕೆಗೆ ಮುಂದಾದರು. ಕಳೆದ ನಾಲ್ಕು ವರ್ಷಗಳಿಂದ ಹಸುವಿನ ಸೆಗಣಿ ಹಾಗೂ ಪಂಚಗವ್ಯಗಳನ್ನು ಬಳಸಿ ಆಕರ್ಷಕ ಮೂರ್ತಿಗಳನ್ನು ರೂಪಿಸುತ್ತಿದ್ದಾರೆ.
ಆರಂಭದಲ್ಲಿ ಸರಳವಾಗಿ ಮೂರ್ತಿಗಳನ್ನು ತಯಾರಿಸುತ್ತಿದ್ದ ಯಲ್ಲಪ್ಪ ಅವರಿಗೆ, ಈಗ ವರ್ಷದಿಂದ ವರ್ಷಕ್ಕೆ ಭಾರಿ ಬೆಂಬಲ ಸಿಗುತ್ತಿದ್ದು, ಪಂಚಗವ್ಯ ಗಣೇಶ ಮೂರ್ತಿಗಳಿಗೆ ಸಾರ್ವಜನಿಕರಿಂದ ಬೇಡಿಕೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಸಹೋದರ ವಿನಾಯಕ ಅವರ ಸಾಥ್ನೊಂದಿಗೆ ಯಲ್ಲಪ್ಪ ಅವರು ಪರಿಸರ ರಕ್ಷಣೆಯ ಜೊತೆಗೆ ಗೋಮಾತೆಯ ಮಹತ್ವವನ್ನು ಸಾರುವ ಕಾಯಕವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
PublicNext
07/09/2026 08:07 am
LOADING...