ಹಡಗಲಿ: ವಿಜಯನಗರ ಜಿಲ್ಲೆಯ ಹೂವಿನಹಡಗಲಿಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ, ಇಸ್ಲಾಂಪೇಟೆ ಮೂಲಕ ಮೆರವಣಿಗೆ ಬಾರದಂತೆ ಮುಸ್ಲಿಂ ಯುವಕರು ಹಾಗೂ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಕಳೆದ ಹಲವು ವರ್ಷಗಳ ಬಳಿಕ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಇಸ್ಲಾಂಪೇಟೆ ಮೂಲಕ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ನಡೆಯುತ್ತಿತ್ತು. ಈ ಮಾರ್ಗವಾಗಿ ಮೆರವಣಿಗೆ ತೆರಳದಂತೆ ಮುಸ್ಲಿಂ ಯುವಕರು ಹಾಗೂ ಮಹಿಳೆಯರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಪೊಲೀಸರು ಹಾಗೂ ಶಾಸಕ ಕೃಷ್ಣ ನಾಯ್ಕ್ ಭೇಟಿ ನೀಡಿ ಎರಡೂ ಗುಂಪಿನವರ ಮನವೊಲಿಕೆ ಮಾಡಿದರು.
ಇದಕ್ಕೂ ಮುನ್ನ ಹಿಂದೂ ಬಾಂಧವರು ಅಲ್ಲಿಯೇ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ಬಳಿಕ ಮಾಹಿತಿ ತಿಳಿದ ಶಾಸಕ ಕೃಷ್ಣ ನಾಯ್ಕ್ ಹಾಗೂ ಎಸ್.ಪಿ. ಜಾಹ್ನವಿ ಸ್ಥಳಕ್ಕೆ ಭೇಟಿ ನೀಡಿ ಮೆರವಣಿಗೆ ಮಾಡುತ್ತಿದ್ದ ಹಿಂದೂ ಬಾಂಧವರನ್ನು ಮನವೊಲಿಸಿ, ಬೇರೆ ಮಾರ್ಗದಿಂದ ಮೆರವಣಿಗೆಗೆ ಅವಕಾಶ ಕಲ್ಪಿಸಲಾಯಿತು. ಪೊಲೀಸರ ಸಂಧಾನ ಯಶಸ್ವಿಯಾದ ಬಳಿಕ ಮುಸ್ಲಿಂ ಸಮುದಾಯದವರು ಪ್ರತಿಭಟನೆಯಿಂದ ಹಿಂದೆ ಸರಿದರು. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಗಣೇಶ ಮೆರವಣಿಗೆಗೆ ಅವಕಾಶ ಮಾಡಿಕೊಡದಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಿರೇ ಹಡಗಲಿ ಹಾಲಶ್ರೀ ಮಠದ ಅಭಿನವ ಹಾಲಶ್ರೀಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಹೇಳಿಕೆಯಲ್ಲಿ ಅವರು, “ನಾವಿರುವುದು ಭಾರತದಲ್ಲಿ ಅಥವಾ ಪಾಕಿಸ್ತಾನದಲ್ಲೋ? ...” ಎಂದು ಪ್ರಶ್ನಿಸಿ, ಮೆರವಣಿಗೆಗೆ ಅಡ್ಡಿಪಡಿಸುವವರ ವಿರುದ್ಧ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಅವರ ಹೇಳಿಕೆಯ ಉಳಿದ ಭಾಗದಲ್ಲಿ ವಿವಿಧ ಐತಿಹಾಸಿಕ ವ್ಯಕ್ತಿಗಳ ಉಲ್ಲೇಖ ಹಾಗೂ ಪಾಕಿಸ್ತಾನಕ್ಕೆ ತೆರಳುವಂತೆ ಹೇಳಿರುವ ವಿವಾದಾತ್ಮಕ ಮಾತುಗಳೂ ಇವೆ.
PublicNext
19/09/2026 01:34 pm
LOADING...